ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಶಂಕಿತನ ಚಹರೆ ಸಿಸಿಟಿವಿಯಲ್ಲಿ ಪತ್ತೆ; ತನಿಖೆ ಚುರುಕು

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಒಂದು ದಿನದ ನಂತರ, ಕರ್ನಾಟಕದ ರಾಜಧಾನಿಯ ವೈಟ್‌ಫೀಲ್ಡ್ ಪ್ರದೇಶದ ಕೆಫೆಯ ಆವರಣದಲ್ಲಿ ವ್ಯಕ್ತಿಯೊಬ್ಬ ಚೀಲವನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ಪೊಲೀಸರ ಪ್ರಕಾರ, ಶಂಕಿತ ವ್ಯಕ್ತಿಈ ಚೀಲವನ್ನು ಕೆಫೆಯಲ್ಲಿ ಇರಿಸಿ ನಂತರ ಸ್ಫೋಟ ಸಂಭವಿಸುವ ಮೊದಲು ಹೊರಟುಹೋಗಿದ್ದಾನೆ. ಶಂಕಿತನ ಜೊತೆಗೆ ಕಾಣಿಸಿಕೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶಂಕಿತ ವ್ಯಕ್ತಿ ತನ್ನ ಮುಖವನ್ನು ಮುಖವಾಡ, ಕನ್ನಡಕ ಮತ್ತು ಕ್ಯಾಪ್ ನಿಂದ ಮರೆಮಾಡಿದ್ದಾನೆ. ಕೆಫೆಯೊಳಗೆ ಅಳವಡಿಸಲಾದ ಕ್ಯಾಮರಾಗಳಲ್ಲಿ ಶಂಕಿತನ ಮುಖ ಸೆರೆಯಾಗಿದೆ.

ಶುಕ್ರವಾರ ಮಧ್ಯಾಹ್ನ 12.50 ರಿಂದ 1 ಗಂಟೆಯ ನಡುವೆ ಸಂಭವಿಸಿದ ಸ್ಫೋಟದಲ್ಲಿ ಹತ್ತು ಮಂದಿ ಗಾಯಗೊಂಡಿದ್ದಾರೆ. ದಾಳಿಗೆ ಪ್ರತಿಕ್ರಿಯೆಯಾಗಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯ ಕಠಿಣ ನಿಬಂಧನೆಗಳನ್ನು ಹಾಕಿದ್ದಾರೆ.