ರಾಜ್ಯದಲ್ಲಿ ಒಳನಾಡು ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ಮೀನುಗಾರಿಕೆ: ಸಚಿವ ಕೋಟ ಸಭೆ

ಬೆಂಗಳೂರು: ರಾಜ್ಯದಲ್ಲಿ ಮೀನುಗಾರಿಕೆ ಒಂದು ಪ್ರಮುಖ ಉದ್ಯಮವಾಗಿ ಬೆಳೆಯಲು ಒಳನಾಡು ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ಮೀನುಗಾರಿಕೆ ಮತ್ತು ಜಲಕೃಷಿಯ ಅಭಿವೃದ್ಧಿಯ ಕುರಿತು ನೀಲನಕ್ಷೆ ತಯಾರಿಸಲು ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ವಿಕಾಸಸೌಧದಲ್ಲಿ ಪರಿಣಿತರ ಸಭೆ ನಡೆಸಿದರು.

ಮೀನುಗಾರರ ಕಲ್ಯಾಣಕ್ಕಾಗಿ 1957 ರಲ್ಲಿ ಸ್ಥಾಪನೆಯಾದ ಮೀನುಗಾರಿಕೆ ಇಲಾಖೆ 1993ರಲ್ಲಿ ತಂದ ಪೂರಕ ಕಾಯ್ದೆ, 2003ರಲ್ಲಿ ತಂದಿರುವ ತಿದ್ದುಪಡಿಗಳು ಸಂಬಂಧಿಸಿದಂತೆ ಸೂಕ್ತ ನಿಯಮಗಳು ರೂಪಿಸಲಾಗದಿರುವ ಕುರಿತು ಸುದೀರ್ಘ ಚರ್ಚೆ ನಡೆಸಿದ ಸಭೆ, ಹಲವು ವಿಚಾರಗಳನ್ನು ವಿಮರ್ಶಿಸಿ, ಇನ್ನೆರಡು ತಿಂಗಳಲ್ಲಿ ನಿಯಮಗಳನ್ನು ರೂಪಿಸಿ ಸಚಿವ ಸಂಪುಟಕ್ಕೆ ಮಂಡಿಸುವಂತೆ ಸಚಿವ ಕೋಟ ಆದೇಶ ನೀಡಿದರು.

ದೇಶದಲ್ಲಿ ಒಳನಾಡು ಮೀನುಗಾರಿಕೆ ಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದ್ದು, ಮೀನು ಉತ್ಪಾದನೆ ಹೆಚ್ಚಿಸುವುದು, ಸುಧಾರಿತ, ತಾಂತ್ರಿಕ ವಿಧಾನಗಳನ್ನು ವಿಸ್ತರಿಸುವುದೂ ಸೇರಿದಂತೆ, ಹಲವು ಆಯಾಮಗಳಲ್ಲಿ ಮೀನುಗಾರಿಕೆ ಅಭಿವೃದ್ಧಿ ನೀಲನಕ್ಷೆ ತಯಾರಿ ಮಾಡಲು ಸಭೆ ನಿರ್ಣಯಿಸಿತು.

ಮರಿಗಳ ಉತ್ಪಾದನೆ, ಕೊಳಗಳ ನಿರ್ಮಾಣವೂ ಸೇರಿದಂತೆ, ಈಗಿರುವ 26 ಸಾವಿರ ಕೆರೆಗಳ ಪೈಕಿ ಮೀನುಗಾರಿಕೆಗೆ ಸಿದ್ದವಾದ ಕೆರೆಗಳ ಕುರಿತು ಅಧ್ಯಯನ ವರದಿಯೊಂದನ್ನು ನೀಡುವಂತೆ ಅಧಿಕಾರಿಗಳಿಗೆ ಸಚಿವ ಶ್ರೀ ಕೋಟ ಸೂಚನೆ ನೀಡಿದರು.

ಒಳನಾಡು ಮೀನುಗಾರಿಕೆಯಲ್ಲಿ ಹೊಸ ತಳಿಗಳ ಸಂಶೋಧನೆ, 2.5 ಲಕ್ಷ ಹೆಕ್ಟೇರ್ ಸವಳು – ಜವಳು ಪ್ರದೇಶದಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸುವುದು, ಮೀನುಗಾರರ ತರಬೇತಿ ಕೇಂದ್ರಗಳಿಗೆ ಕಾಯಕಲ್ಪ ಒದಗಿಸುವುದೂ ಸೇರಿದಂತೆ, ಪ್ರವಾಸೋದ್ಯಮ ಹಾಗೂ ಕ್ರೀಡಾ ಮೀನುಗಾರಿಕೆಯನ್ನು ಅಳವಡಿಸಿ ಕೊಳ್ಳುವುದರ ಕುರಿತು ಸುದೀರ್ಘ ಚರ್ಚೆ ನಡೆದು, ಬೆಂಗಳೂರು ಸೇರಿದಂತೆ ರಾಜ್ಯದ ಆಯ್ದ ಭಾಗಗಳಲ್ಲಿ ಮೀನುಗಾರಿಕೆ ಕ್ರೀಡೆಯನ್ನು ಉತ್ತೇಜಿಸುವ ದೃಷ್ಟಿಯಿಂದ, ಗಾಳ ಹಾಕಿ ಮೀನು ಹಿಡಿಯುವ ಪದ್ಧತಿಯನ್ನು ಜನಪ್ರಿಯಗೊಳಿಸಲು ಸಭೆ ಸಹಮತ ನೀಡಿತು.

ಶ್ರೀ ಅಂಬಿಗರ ಚೌಡಯ್ಯ ನಿಗಮದ ವತಿಯಿಂದ ಮೀನುಗಾರಿಕೆ ತರಬೇತಿ ಹಾಗೂ ಮೀನು ಸಾಕಣಿಕೆಯ ಬಗ್ಗೆ ಹಲವಾರು ನಿರ್ಣಯವನ್ನು ಸಭೆ ಕೈಗೊಂಡಿತು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈಗಿರುವ ಸ್ಥಿತಿಯಲ್ಲಿ 50 ಕೋಟಿ ಮೀನು ಮರಿಗಳ ಅವಶ್ಯಕತೆಯಿದ್ದು, ಶೇಕಡಾ 50 ರಷ್ಟು ಮಾತ್ರ ಮೀನು ಮರಿಗಳ ಪೂರೈಕೆ ಆಗುತ್ತಿದ್ದು, ಹೆಚ್ಚುವರಿ ಉತ್ಪಾದನೆಗೆ ಅಗತ್ಯ ಯೋಜನೆ ರೂಪಿಸಬೇಕಾಗಿ ಸೂಚಿಸಿದರು.

ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಬಹುತೇಕ ಹಿರಿಯ ನಿವೃತ್ತ ಅಧಿಕಾರಿಗಳು, ವಿಧಾನ ಪರಿಷತ್ ಸದಸ್ಯರಾದ ಶ್ರೀ ರವಿಕುಮಾರ್ ಅವರು, ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಗಳಾದ ಕ್ಯಾಪ್ಟನ್ ಮಣಿವಣ್ಣನ್, ನಿರ್ದೇಶಕರಾದ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ಮೀನುಗಾರಿಕೆ ಕಾಲೇಜು ಡೀನ್ ಶ್ರೀ ಸೇಂಥಿಲ್ ವೇಲ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.