ರೆಖ್ಯ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಗಾಯಾಳು ಆಸ್ಪತ್ರೆಗೆ ದಾಖಲು 

ಬೆಳ್ತಂಗಡಿ: ಕ್ಷುಲ್ಲಕ ಕಾರಣವೊಂದಕ್ಕೆ ಕ್ರಿಮಿನಲ್ ಹಿನ್ನೆಲೆಯುಳ್ಳ ಇಬ್ಬರು ಸೇರಿ ಅಮಾಯಕ ಯುವಕನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಕಡೆಂಬಲ ಸಮೀಪ ನಡೆದಿದೆ.
ರೆಖ್ಯಾ ಗ್ರಾಮದ ಕೆಳೆಂಜಿನೋಡಿ ನಿವಾಸಿ ಗಿರೀಶ್ ಗೌಡ (25) ಹಲ್ಲೆಗೊಳಗಾದ ಯುವಕ. ಹಲ್ಲೆಗೊಳಗಾದ ಯುವಕನನ್ನು ಬೆಳ್ತಂಗಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಪ್ರಕರಣದ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: 
ರೆಖ್ಯಾ ಗ್ರಾಮದ ಕೆಡಂಬಲ ಸಮೀಪದ ಗುಂಡ್ಯ ಹೊಳೆಯಲ್ಲಿ ರೆಖ್ಯಾದ ಯುವಕರ ಗುಂಪೊಂದು ಸ್ನಾನ ಮಾಡುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ರೆಖ್ಯಾ ಗ್ರಾಮದ ಕಟ್ಟೆ ನಿವಾಸಿಗಳಾದ ವಿಶ್ವನಾಥ ಕೆ.ಎಸ್. ಅಲಿಯಾಸ್ ಚಡ್ಡಿ ಬಾಲ ಮತ್ತು ರಮೇಶ್ ಆಚಾರಿ ಎಂಬವರು ಮದ್ಯ ಸೇವಿಸಿ ಏಕಾಏಕಿ ದಾಂಧಲೆ ಮಾಡಲು ಶುರುಮಾಡಿದ್ದರು. ಇವರನ್ನು ತಡೆಯಲು ಬಂದ ಗಿರೀಶ್ ಗೌಡ ಎಂಬವರ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ವಿಶ್ವನಾಥ ಕೆ.ಎಸ್ ಅಲಿಯಾಸ್ ಚಡ್ಡಿ ಬಾಲ ಮತ್ತು ರಮೇಶ್ ಆಚಾರಿ ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದು, ವಿಶ್ವನಾಥ ಕೆ.ಎಸ್ ವಿರುದ್ಧ ರಾತ್ರಿ ವೇಳೆ ವಾಹನಗಳಿಂದ ಡೀಸೆಲ್ ಕಳ್ಳತನ, ಯುವತಿಯ ಮಾನಭಂಗಕ್ಕೆ ಯತ್ನ ಕೇಸ್ ನಲ್ಲಿ 2 ಬಾರಿ ಜೈಲುವಾಸ ಅನುಭವಿಸಿದ್ದು ಜಾಮೀನು ಪಡೆದು ಬಿಡುಗಡೆಯಾಗಿದ್ದ. ಅನಂತರವು ತನ್ನ ಹಾಳೆ ಚಾಳಿ ಬಿಡದ ಈತ ಮನೆಯ ಹಿಂದಿರುವ ಶಾಲೆಯ ಪೀಠೋಪಕರಣ ಕಳವು, ಶಾಲೆಯ ಪಕ್ಕದಲ್ಲೇ ಇರುವ ಮರದ ಕೆಳಗೆ ಜೂಜಾಟ, ಪಕ್ಕದ ಮನೆಯ ಮೇಲೆ ಕಲ್ಲು ತೂರಾಟ ಹಾಗೂ ರಮೇಶ್ ಆಚಾರಿ ವಿರುದ್ಧ ಕಾಡು ಮರಗಳ ಕಳ್ಳ ಸಾಗಣೆ ಹೀಗೆ ನಾನಾ ಕ್ರಿಮಿನಲ್ ಕೇಸ್ ಗಳು ಇವರಿಬ್ಬರ ಮೇಲೆ ಹಿಂದೆಯೇ ದಾಖಲಾಗಿದ್ದು, ವಿಚಾರಣೆಗಳು ನಡೆಯುತ್ತಿದೆ. ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.