ಅಭಿಮಾನಿಗಳು, ಪಕ್ಷ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಬೆಳ್ತಂಗಡಿ ಅಭ್ಯರ್ಥಿ ಹರೀಶ್ ಪೂಂಜಾ

ಬೆಳ್ತಂಗಡಿ: ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾದೆ. ಈ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯವಾದುದು. ಬೆಳ್ತಂಗಡಿಗೆ ಬೆಳ್ತಂಗಡಿಯೇ ಸಂಭ್ರಮಿಸಿದ ದಿನವಿದು. ನವ ಬೆಳ್ತಂಗಡಿ ನಿರ್ಮಾಣದ ಕನಸು ಹೊತ್ತು ಮೊದಲ ಬಾರಿಗೆ 2018 ರಲ್ಲಿ ನಾಮಪತ್ರ ಸಲ್ಲಿಸಿದ್ದೆ. ಇಂದು 2023 ರಲ್ಲಿ ನವ ಬೆಳ್ತಂಗಡಿಯನ್ನು ಹೊಸ ಪರ್ವಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಇದು ಕೇವಲ ನಾಮಪತ್ರ ಸಲ್ಲಿಕೆಯ ದಿನವಲ್ಲ, ವಿಜಯ ಸಂಕಲ್ಪದ ದಿನ. ಮೇ 13 ರಂದು ಮತ್ತೊಮ್ಮೆ ಸಂಭ್ರಮಿಸುವ ಸಂಕಲ್ಪದೊಂದಿಗೆ ಮರಳಿದ್ದೇವೆ, ಆ ಸಂಕಲ್ಪವನ್ನು ಸಾಕಾರಗೊಳಿಸಲು ವಿರಮಿಸದೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳೋಣ ಎಂದು ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಹೇಳಿದರು.

ನಾಮಪತ್ರ ಸಲ್ಲಿಕೆ ಹಾಗೂ ಮೆರವಣಿಗೆಯ ಸಂದರ್ಭದಲ್ಲಿ ಕೇರಳ ಬಿಜೆಪಿ ರಾಜ್ಯ ಕಾರ್ಯದರ್ಶಿ ಅಡ್ವ ಶ್ರೀಕಾಂತ್‌, ಬೆಳ್ತಂಗಡಿ ಬಿಜೆಪಿ ಪಕ್ಷದ ಜೇಷ್ಠ ಕಾರ್ಯಕರ್ತ ನೇಮಿರಾಜ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌, ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ಮಾಜಿ ಶಾಸಕಪ್ರಭಾಕರ ಬಂಗೇರ, ಮಾಜಿ ಮಂಡಲ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಹಿರಿಯರಾದ ಸುಬ್ರಮಣ್ಯ ಅಗರ್ತ, ಮಂಡಲ ಪದಾಧಿಕಾರಿಗಳು, ಪಕ್ಷದ ಹಿರಿಯರು, ಜನಪ್ರತಿನಿಧಿಗಳು, ಅಪಾರ ಸಂಖ್ಯೆಯ ಕಾರ್ಯಕರ್ತ ಬಂಧುಗಳು, ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದರು.