ಬೆಳ್ತಂಗಡಿ: ಬಾವಿಗೆ ಬಿದ್ದ ಚಿರತೆಯ ರಕ್ಷಣೆ

ಮಂಗಳೂರು: ಆಹಾರವನ್ನರಿಸಿ ನಾಡಿಗೆ ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ನಾವೂರಿನಲ್ಲಿ ಸೋಮವಾರ ರಾತ್ರಿಯ ವೇಳೆ ನಡೆದಿದೆ.
ನಾವೂರು ಗ್ರಾಮದ ಗಂಗಯ್ಯ ಗೌಡ ಎಂಬುವವರ ಮನೆಯ ಬಾವಿಗೆ ರಾತ್ರಿಯ ವೇಳೆ ಚಿರತೆ ಬಿದ್ದಿದ್ದು, ಆಹಾರ ಹುಡುಕುತ್ತಾ ಬಂದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ ಎನ್ನಲಾಗಿದೆ.
ಚಿರತೆ ಬಿದ್ದ ಬಾವಿಯಲ್ಲಿ‌ ಸಾಧಾರಣ ನೀರಿದ್ದು, ಹೀಗಾಗಿ‌ ಚಿರತೆಯ ಬಾವಿಯ ಬದಿಯಲ್ಲಿ ಕುಳಿತಿತ್ತು.
ಮಂಗಳವಾರ ಬೆಳಗ್ಗೆ ಚಿರತೆ ಬಿದ್ದಿರುವುದನ್ನು ಗಮನಿಸಿದ‌ ಮನೆಯವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು‌ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರ ಸಹಕಾರದಿಂದ ಬಾವಿಯಿಂದ ಮೇಲೆತ್ತಿ‌ ರಕ್ಷಣೆ ಮಾಡಲಾಗಿದೆ.