ಬೆಳ್ತಂಗಡಿಯ ಥೋಮಸ್ ನೀಲಿಯಾರ ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದಿಂದ ಕಣಕ್ಕೆ?

ಮಂಗಳೂರು: ಮೂಲತಃ ದ.ಕ ಜಿಲ್ಲೆಯ ಬೆಳ್ತಂಗಡಿಯ ಗಂಡಿಬಾಗಿಲು ಗ್ರಾಮದ ನಿವಾಸಿಯಾಗಿರುವ, ಪ್ರಸ್ತುತ 25 ವರ್ಷಗಳಿಂದ ಬೆಂಗಳೂರು ಸರ್ವಜ್ಞನಗರದಲ್ಲಿ ನೆಲೆಯಾಗಿರುವ ಥೋಮಸ್ ನೀಲಿಯಾರ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು ಪದವೀಧರರಾಗಿರುವ ಇವರು, ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಸದಸ್ಯರು ಮತ್ತು ಕೇರಳದ ಪ್ರಭಾರಿ ಆಗಿದ್ದು, ಬೆಂಗಳೂರು ನಗರ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರೂ ಆಗಿದ್ದಾರೆ.

ಥೋಮಸ್(ಸುರೇಶ್) ಚೆರಿಯನ್ ನೀಲಿಯಾರ ಸರ್ವಜ್ಞ ನಗರ ಕ್ಷೇತ್ರದ ಬಿಜೆಪಿ ನಾಮಾಂಕಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಹಾಲಿ ಕಾಂಗ್ರೆಸ್ ಶಾಸಕರ ವಿರುದ್ದ ಕ್ಷೇತ್ರದಲ್ಲಿ ಬಿಜೆಪಿಯು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದಲ್ಲಿ ವಿಧಾನಸಭೆ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಪಕ್ಷಕ್ಕೆ ನೆರವು ಆಗಲಿದೆ ಎನ್ನುವ ನಂಬಿಕೆಗಳಿವೆ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆಯು ಅಧಿಕವಾಗಿದ್ದು ಅವರ ಮತ ನಿರ್ಣಾಯಕವಾಗಲಿದೆ.