ಜೇನು ಕೃಷಿ ಕಲಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ; ಆರೋಪಿಯ ಬಂಧನ.

ಉಪ್ಪಿನಂಗಡಿ: ಕೂಲಿ ಕಾರ್ಮಿಕ ಕುಟುಂಬದ 13 ವರ್ಷದ ಬಾಲಕಿಯನ್ನು ಜೇನು ಕೃಷಿ ಕಲಿಸುವ ನೆಪದಲ್ಲಿ ಮನೆಯಲ್ಲಿರಿ ಸಿಕೊಂಡು, ನಿರಂತರ ಅತ್ಯಾಚಾರ ಎಸಗಿದ ಆರೋಪದಡಿ ನೆಕ್ಕಿಲಾಡಿ ಬೇರಿಕೆ ನಿವಾಸಿ ಅಬ್ದುಲ್ ಗಫೂರ್ (50) ಎಂಬಾತನನ್ನು ಉಪ್ಪಿನಂಗಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಉತ್ತರ ಕರ್ನಾಟಕ ಭಾಗದಿಂದ ಬಂದಿದ್ದ ಕುಟುಂಬವೊಂದರ ಬಾಲಕಿಗೆ ಆರೋಪಿಯು ಮನೆಯಲ್ಲೇ ವಾಸ್ತವ್ಯ ಕಲ್ಪಿಸಿದ್ದ. ಪೋಷಕರು ಆರೋಪಿಯನ್ನು ನಂಬಿ ಬಾಲಕಿಯನ್ನು ಮನೆಯಲ್ಲಿ ಬಿಟ್ಟು ಊರಿಗೆ ಹೋಗಿದ್ದರು.

ಡಿ.19ರಂದು ಊರಿಂದ ವಾಪಸ್‌ ಬಂದಿದ್ದ ಬಾಲಕಿಯ ತಾಯಿ ಹಾಗೂ ಸೋದರತ್ತೆ ಬಾಲಕಿಯ ಯೋಗಕ್ಷೇಮ ವಿಚಾರಿಸಲು ಆರೋಪಿಯ ಮನೆಗೆ ಹೋಗಿದ್ದರು. ಆಗ ಬಾಲಕಿ ಆರೋಪಿಯ ಕೃತ್ಯವನ್ನು ತಿಳಿಸಿದ್ದಾಳೆ. ಆಕ್ರೋಶಗೊಂಡ ತಾಯಿ, ಆರೋಪಿ ಜೊತೆ ವಾಗ್ವಾದ ನಡೆಸಿದ್ದರು. ಆಗ 112 ಸಂಖ್ಯೆಗೆ ಕರೆ ಮಾಡಿದ್ದ ಆರೋಪಿ, ಪೊಲೀಸರನ್ನು ಕರೆಯಿಸಿ ಮಹಿಳೆ ವಿರುದ್ಧವೇ ಕ್ರಮಕ್ಕೆ ಒತ್ತಾಯಿಸಿದ್ದ. ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.

ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಅಬ್ದುಲ್ ಗಫೂರ್ ಜೇನು ಕೃಷಿಕನಾಗಿದ್ದು, ಹಲವು ಕಡೆ ವೇದಿಕೆಗಳಲ್ಲಿ ಜೇನು ಕೃಷಿ ಬಗ್ಗೆ ಮಾಹಿತಿ ನೀಡುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.