ಶಿರ್ವ: ಬಂಟಕಲ್ಲು ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ: ಪ್ರಸ್ತುತ ಕಾಲಘಟ್ಟದಲ್ಲಿ ಹಲ್ಲಿನ ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿದ್ದು ವಿಶೇಷವಾಗಿ ದವಡೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾದಾಗ ಶಸ್ತ್ರಚಿಕಿತ್ಸೆ ನಡೆಸಬೇಕಾದ ಸಂದರ್ಭದಲ್ಲಿ ದಂತ ವೈದ್ಯರು ಸಾಮಾನ್ಯವಾಗಿ ದೋಷಪೂರಿತ ದವಡೆಯ ಸಿ.ಟಿ. ಸ್ಕ್ಯಾನ್‌ ಅಥವಾ ಸಿ.ಬಿ. ಸ್ಕ್ಯಾನ್‌ ಮೂಲಕ ದವಡೆಯ ಚಿತ್ರಣವನ್ನು ಪಡೆಯುತ್ತಿದ್ದರು. ಇದರ ಆಧಾರದಲ್ಲಿ ರೋಗಗ್ರಸ್ತ ಭಾಗಗಳನ್ನು ನಿರ್ಧರಿಸಿ, ಬಳಿಕ ಶಸ್ತ್ರಚಿಕಿತ್ಸೆ ಮಾಡಬೇಕಾದುದರಿಂದ ದವಡೆಯ ಸರ್ಜರಿ ಪೂರ್ಣಗೊಳಿಸಲು ಅಧಿಕ ಸಮಯ ಬೇಕಾಗುತ್ತಿತ್ತು.
ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ಚೈತ್ರಾ ಪೈ, ಮಹಿಮಾ ಗಾಣಿಗ, ಅಕ್ಷಿತಾ ಸಾಲಿಯಾನ್‌ ಮತ್ತು ದೀಪ್ತಿ ಶೆಟ್ಟಿ ಮಣಿಪಾಲದ ಕುಮುದ ಹೆಲ್ತ್ಟೆಕ್‌ ಕಂಪನಿಯ ಡಾ| ಸಂಪತ್‌ಕುಮಾರ್‌ ಹಾಗೂ ವಿಭಾಗದ ಸಹಾಯಕ ಪ್ರಾಧ್ಯಾಪಕ ವೇಣುಗೋಪಾಲ್ರಾವ್‌ ಅವರ ಮಾರ್ಗದರ್ಶನದಲ್ಲಿ ತಯಾರಿಸಿದ 3-ಡಿ ರಿಕಸ್ಟ್ರಕ್ಷನ್‌ಆಫ್‌ ಮ್ಯಾಂಡಿಬಲ್ ತ್ರೂ ಪ್ಯಾನರೊಮಿಕ್‌ಎಕ್ಸ್‌ರೇ ಇಮೇಜಸ್‌ ಎಂಬ ಯೋಜನೆ (ಪ್ರಾಜೆಕ್ಟ್) ಅಭಿವೃದ್ಧಿಪಡಿಸಿದ್ದಾರೆ.
ಪ್ಯಾನರೋಮಿಕ್‌ ಎಕ್ಸ್‌ರೇ ವಿಧಾನದ ಮೂಲಕ ಶಸ್ತ್ರಚಿಕಿತ್ಸೆಗೂ ಮೊದಲೇ ರೋಗಿಯ ದವಡೆಯ ಚಿತ್ರವನ್ನು ತೆಗೆದು ಆ ಎಕ್ಸ್‌ರೇ ಚಿತ್ರವನ್ನು ಸೂಕ್ತವಾಗಿ ಸಂಸ್ಕರಿಸಿ, ಅದರ ಆಧಾರದಲ್ಲಿ ದೋಷಪೂರಿತ ದವಡೆಯ ಪ್ರತಿಕೃತಿಯನ್ನು ತಯಾರಿಸಿ ಅದನ್ನು ಒಂದು ಪ್ರಮಾಣಿತ ಮಾದರಿಯೊಂದಿಗೆ ಹೋಲಿಕೆ ಮಾಡುತ್ತಾರೆ. ಅದರ ಆಧಾರದಲ್ಲಿ ದೋಷಪೂರಿತ ಭಾಗವನ್ನು ಸರ್ಜರಿ ನಡೆಸುವ ಮೊದಲೇ ನಿರ್ಧರಿಸಬಹುದಾಗಿದೆ. ಇದರಿಂದ ಸರ್ಜರಿ ಮಾಡುವ ಸಮಯವೂ ಉಳಿತಾಯವಾಗುವುದಲ್ಲದೆ ಪ್ಯಾನ ರೊಮಿಕ್‌ಎಕ್ಸ್‌ರೇ ವಿಧಾನದಲ್ಲಿ, ಸಿಟಿ ಸ್ಕ್ಯಾನ್‌, ಅಥವಾ ಸಿ.ಬಿ. ಸ್ಕ್ಯಾನ್‌ಗಳಿಗಿಂತ ಕಡಿಮೆ ಪ್ರಮಾಣದಲ್ಲಿ ರೋಗಿಯ ದೇಹವು ವಿಕಿರಣಗಳ ಪ್ರಭಾವಕ್ಕೆ ಒಳಗಾಗುವುದರಿಂದ ಯಾವುದೇ ಅಪಾಯದ ಸಾಧ್ಯತೆ ಕಡಿಮೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.