ಅಧಿಕಾರಿಗಳ ಫಾರಿನ್ ಟೂರ್ ಗೆ ರಾಜ್ಯ ಸರ್ಕಾರದಿಂದ ಬ್ರೇಕ್!

ಬೆಂಗಳೂರು: ಸರಕಾರಿ ಖರ್ಚಿನಲ್ಲಿ ಅಧಿಕೃತ ವಿದೇಶ ಪ್ರವಾಸ ಕೈಗೊಂಡು ಅದರ ವರದಿ ಸಲ್ಲಿಸದ ಕಾರಣಕ್ಕಾಗಿ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ರಾಜ್ಯ ಸರಕಾರ ಬ್ರೇಕ್‌ ಹಾಕಿದೆ.

2024ರ ಆಗಸ್ಟ್‌ ನಿಂದ 2025ರ ಜುಲೈವರೆಗೆ ರಾಜ್ಯ ಸರಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಅಧಿಕೃತ ವಿದೇಶ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿ, ಕಲಿಕೆ ಹಾಗೂ ಶಿಫಾರಸುಗಳೊಂದಿಗೆ ಸರಕಾರಕ್ಕೆ ಅಧ್ಯಯನ ವರದಿಯನ್ನು ಒಂದು ವಾರದೊಳಗಾಗಿ ಸಲ್ಲಿಸುವಂತೆ ಸಿಎಂ ಸೂಚಿಸಿದ್ದರು. ಆದರೆ ಹಲವು ಅಧಿಕಾರಿಗಳು ಕೈಗೊಂಡಿರುವ ಅಧಿಕೃತ ವಿದೇಶ ಪ್ರವಾಸದ ವರದಿಗಳನ್ನು ಸಲ್ಲಿಸದಿರುವುದು ಸರಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಗರಂ ಆಗಿರುವ ಸಿಎಂ ಸಿದ್ದರಾಮಯ್ಯ, ಈ ನಿರ್ಣಯಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಮುಂಬರುವ ದಿನಗಳಲ್ಲಿ ಅಧಿಕೃತ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸುವ ಮುನ್ನ ಕಡ್ಡಾಯವಾಗಿ ಈ ಹಿಂದೆ ಕೈಗೊಂಡಿರುವ ಪ್ರವಾಸಗಳ ಕಲಿಕೆ ಹಾಗೂ ಅನುಷ್ಠಾನ ವರದಿ ನೀಡಿದ್ದಲ್ಲಿ ಮಾತ್ರ ಹಾಲಿ ಪ್ರವಾಸದ ಪ್ರಸ್ತಾವನೆಗೆ ಅನುಮತಿ ನೀಡುವ ಕುರಿತು ಪರಿಶೀಲಿಸಲಾಗುವುದು ಎಂದು ಈ ಮೂಲಕ ಸೂಚಿಸಿದೆ.
ಈ ವರ್ಷ 2025ನೇ ಸಾಲಿನ ಅಂತ್ಯದವರೆಗೆ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕೃತ ವಿದೇಶ ಪ್ರವಾಸಗಳನ್ನು ನಿರ್ಬಂಧಿಸಲಾಗಿದೆ ಎಂದು ಸಿಎಂ ಒಪ್ಪಿಗೆ ಮೇರೆಗೆ ಸರಕಾರ ಆದೇಶಿಸಿದೆ.