ಬೆಂಗಳೂರು ಕಾಲ್ತುಳಿತ ಪ್ರಕರಣ: ಹೆಬ್ರಿ ಚಿನ್ಮಯಿ ಶೆಟ್ಟಿ ಕುಟುಂಬಕ್ಕೆ ಪರಿಹಾರ ಹಸ್ತಾಂತರ

ಹೆಬ್ರಿ (ಉಡುಪಿ): ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದಿಂದ ಮೃತಪಟ್ಟ ಹೆಬ್ರಿಯ ಚಿನ್ಮಯಿ ಶೆಟ್ಟಿ ಕುಟುಂಬಕ್ಕೆ ಸರ್ಕಾರದ ₹25 ಲಕ್ಷ ನೆರವಿನ ಚೆಕ್‌ ಅನ್ನು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರು ಹಸ್ತಾಂತರಿಸಿದರು.

‘ನಾವು ಮಗಳನ್ನು ಕಳೆದುಕೊಂಡಿದ್ದೇವೆ. ಈ ನೋವು ನಮಗೆ ನಿರಂತರ. ಇದು ಮರೆಯಲು ಸಾಧ್ಯವಿಲ್ಲದ ದುರ್ಘಟನೆ’ ಎಂದು ಚಿನ್ಮಯಿ ಅವರ ತಂದೆ ಕರುಣಾಕರ ಶೆಟ್ಟಿ ಕಣ್ಣೀರಾದರು.

‘ಮಗಳ ಸಾವಿಗೆ ಪರಿಹಾರವಾಗಿ ಕೇವಲ ಹಣವಲ್ಲ, ನನ್ನ ಮಗನಿಗೆ ಸರ್ಕಾರಿ ನೌಕರಿ ನೀಡಬೇಕು’ ಎಂದು ಕರುಣಾಕರ ಶೆಟ್ಟಿ ಅವರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.

‘ಸರ್ಕಾರದ ಆದೇಶದಂತೆ ₹25 ಲಕ್ಷ ಪರಿಹಾರವನ್ನು ನೀಡಲಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಸದಾ ಕುಟುಂಬದೊಂದಿಗೆ ಇರುತ್ತದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬೆಂಗಳೂರಿನ ತಿಪ್ಪಸಂದ್ರದಲ್ಲಿ ನೆಲೆಸಿರುವ ಚಿನ್ಮಯಿ ಅವರ ಕುಟುಂಬ ಈಗ ಮಗಳ ಅಂತಿಮ ಕಾರ್ಯಗಳನ್ನು ನೆರವೇರಿಸಲು ಅಜ್ಜಿ ಮನೆ ಹೆಬ್ರಿ ತಾಲ್ಲೂಕಿನ ಮದಗದ ಮನೆಗೆ ಬಂದಿದೆ. ಹಾಗಾಗಿ ಹೆಬ್ರಿಗೆ ಬಂದು ಪರಿಹಾರದ ಚೆಕ್‌ ಹಸ್ತಾಂತರಿಸಲಾಗಿದೆ. ಎಸ್.ಪಿ ಹರಿರಾಮ್ ಶಂಕರ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಹೆಬ್ರಿ ತಹಶೀಲ್ಧಾರ್‌ ಎಸ್‌. ಎ. ಪ್ರಸಾದ್‌ ಉಪಸ್ಥಿತರಿದ್ದರು.