ಬೆಂಗಳೂರು – ಧಾರವಾಡ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸಂಚಾರ ಜೂ. 27ರಿಂದ ಆರಂಭ: ವೇಳಾಪಟ್ಟಿ ಪ್ರಕಟ

ಹುಬ್ಬಳ್ಳಿ : ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು
ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ವಂದೇ ಭಾರತ್​ ಬೆಂಗಳೂರು – ಧಾರವಾಡ ಮಧ್ಯೆಯ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದು, ಜೂನ್​ 27 ರಿಂದ ಅಧಿಕೃತ ಓಡಾಟ ಆರಂಭವಾಗಲಿದೆ. ವಂದೇ ಭಾರತ್ ರೈಲು ಜೂ. 27 ರಿಂದ ಕೆಎಸ್‌ಆರ್‌ ಬೆಂಗಳೂರು – ಧಾರವಾಡ ಮಧ್ಯೆ ಸಂಚಾರ ಪ್ರಾರಂಭಿಸಲಿದೆ. ಧಾರವಾಡ ರೈಲು ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಂದು ವರ್ಚುಯಲ್ ಆಗಿ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಪ್ರತಿ ಮಂಗಳವಾರ ಹೊರತುಪಡಿಸಿ, ವಾರದ ಆರು ದಿನ ಈ ರೈಲು ಸಂಚರಿಸಲಿದೆ. ಬೆಳಗ್ಗೆ 5.45 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ವಂದೇ ಭಾರತ್ ರೈಲು, ಮುಂಜಾನೆ 5.55 ಕ್ಕೆ ಯಶವಂತಪುರ, 9.15 ಕ್ಕೆ ದಾವಣಗೆರೆ, 11.30ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ, ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ.

ಮರಳಿ ಧಾರವಾಡ ನಿಲ್ದಾಣದಿಂದ ಮಧ್ಯಾಹ್ನ 1.15 ಕ್ಕೆ ಹೊರಟು, 1.35 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ, 3.38ಕ್ಕೆ ದಾವಣಗೆರೆ, ರಾತ್ರಿ 7.13ಕ್ಕೆ ಯಶವಂತಪುರ ಹಾಗೂ 7.45 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ.

ಸಿಕಂದರಾಬಾದ್ – ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ : ಇನ್ನು ಕಳೆದ ಏಪ್ರಿಲ್​ ತಿಂಗಳ 8 ನೇ ತಾರೀಖಿನಂದು ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್​ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿಕಂದರಾಬಾದ್ – ತಿರುಪತಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದರು. ಆಂಧ್ರಪ್ರದೇಶ ಹಾಗೂ ತೆಲಂಗಾಣ ನಡುವಿನ ಎರಡನೇ ವಂದೇ ಭಾರತ್​ ರೈಲು ಇದಾಗಿದ್ದು, 3 ತಿಂಗಳ ಅಂತರದಲ್ಲಿ 2ನೇ ಸೆಮಿ ಹೈಸ್ಪೀಡ್ ಎಕ್ಸ್‌ಪ್ರೆಸ್ ರೈಲು ಕಾರ್ಯಾರಂಭಗೊಂಡಿದೆ.
ಕೆಎಸ್‌ಆ‌ರ್​ ಬೆಂಗಳೂರು ಮತ್ತು ಧಾರವಾಡ ಮಧ್ಯೆ ಸಂಚರಿಸುವ ಈ ವಂದೇ ಭಾರತ್ ರೈಲು ಸದ್ಯಕ್ಕೆ 8 ಬೋಗಿಗಳನ್ನು ಹೊಂದಿದೆ. ಪ್ರಯಾಣಿಕರ ಸ್ಪಂದನೆ ಗಮನಿಸಿ, ಬೋಗಿಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಂದೇ ಭಾರತ್‌ ಪ್ರಾಯೋಗಿಕ ಓಡಾಟ : ಜೂನ್​ 19 ರಂದು ಮೊದಲ ಬಾರಿಗೆ ಬೆಂಗಳೂರು – ಧಾರವಾಡ ರೈಲು ನಿಲ್ದಾಣಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಓಡಾಟ ನಡೆಸಲಾಗಿತ್ತು. ಬೆಳಗ್ಗೆ 5:45 ಕ್ಕೆ ಬೆಂಗಳೂರಿನಿಂದ ರೈಲು ಪ್ರಯಾಣ ಬೆಳಸಿತ್ತು, ರೈಲಿನಲ್ಲಿ ತಾಂತ್ರಿಕ ತಂಡ ಹಾಗೂ ಅಧಿಕಾರಿಗಳಿದ್ದರು. ಆ ಅಧಿಕಾರಿಗಳು ಎಲ್ಲಾ ಬಗೆಯ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದರು. ಇತ್ತೀಚಿಗಷ್ಟೇ ಧಾರವಾಡ – ಬೆಂಗಳೂರು ಮಧ್ಯೆ ಎಲೆಕ್ಟ್ರಿಕಲ್ ಲೈನ್ ಎಳೆಯಲಾಗಿದ್ದು, ಇದೇ ವೇಳೆ, ಇದರ ಪರೀಕ್ಷೆಯನ್ನು ಮಾಡಲಾಗಿತ್ತು. ಎಲ್ಲವೂ ಯಶಸ್ವಿಯಾಗಿ ನಡೆದಿದೆ ಎಂದು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದರು.