‘ಬಲಿಪೆ’ ತುಳು ಚಿತ್ರದ ಪೋಸ್ಟರ್ ಬಿಡುಗಡೆ: ಮೇ 24ರಂದು ತೆರೆಗೆ

ಮಂಗಳೂರು: ಎಂಡೊಸಲ್ಫಾನ್‌ ದುರಂತ ಮತ್ತು ತುಳುನಾಡಿನ ದೈವ–ದೇವರ ಕಥೆಯನ್ನು ಒಳಗೊಂಡ, ಗಾಯತ್ರಿ ಫಿಲ್ಮ್ ಮೇಕರ್ಸ್ ನಿರ್ಮಿಸಿರುವ ‘ಬಲಿಪೆ’ ತುಳು ಚಿತ್ರ ಮೇ 24ರಂದು ತೆರೆ ಕಾಣಲಿದೆ ಎಂದು ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರುವ ದೈವನರ್ತಕ ದಯಾನಂದ ಕತ್ತಲ್‌ಸಾರ್ ತಿಳಿಸಿದರು.

ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ಚಿತ್ರದ ಪೊಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

ಬಲಿಪೆ ಎಂದರೆ ದೈವದ ವಾಹನ. ನೂರು ಹುಲಿಯ ಶಕ್ತಿ ಇರುವ ಹುಲಿ ಎಂದರ್ಥ. ಪೆರಾರ ಕ್ಷೇತ್ರ, ಕಾರಿಂಜ, ಬಜಪೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಎರಡು ಹಾಡುಗಳು ಇವೆ. ನಾಯಕ ನಟನಾಗಿ ಹರ್ಷಿತ್ ಬಂಗೇರ, ನಾಯಕಿಯಾಗಿ ಅಂಕಿತಾ ಪಟ್ಲ ಪಾತ್ರ ಮಾಡಿದ್ದು ತಾರಾ ಗಣದಲ್ಲಿ ಪ್ರಾಣ್ ಶೆಟ್ಟಿ, ಐಶ್ವರ್ಯಾ ಆಚಾರ್ಯ, ಗಿರೀಶ್ ಹೆಗ್ಡೆ, ಧೃತಿ ಸಾಯಿ, ಸುದಿಷ್ಣ ಶೆಟ್ಟಿ, ನವೀನ್ ಬೊಂದೆಲ್‌, ದೀಪಕ್ ಸುವರ್ಣ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಹೇಮಂತ್ ಸುವರ್ಣ ನಿರ್ಮಿಸಿರುವ ಚಿತ್ರದ ಕಥೆ, ರಚನೆ ಮತ್ತು ನಿರ್ದೇಶನ ಪ್ರಸಾದ್ ಪೂಜಾರಿ ಅರ್ವ ಅವರದ್ದಾಗಿದ್ದು, ರಕ್ಷಿತ್ ಚಿನ್ನು ಮತ್ತು ಉದಯ್ ಬಲ್ಲಾಳ್‌ ಛಾಯಾಗ್ರಹಣ ನೆರವೇರಿಸಿ, ಆಕಾಶ್ ರೆಡ್ಡಿ ಸಂಗೀತ ನೀಡಿದ್ದಾರೆ. ಕಲಾವತಿ ದಯಾನಂದ್‌, ಅಕ್ಷಯ್ ಜಗದೀಶ್‌ ಮತ್ತು ಅಖಿಲಾ ಪಜಿಮಣ್ಣು ಹಾಡಿದ್ದಾರೆ. ಸುರೇಶ್ ಶೆಟ್ಟಿ ಸಾಹಸ ನಿರ್ದೇಶನ ಮಾಡಿದ್ದಾರೆ. ಯುಗಾದಿಯಂದು ಮೊದಲ ಹಾಡು ಮತ್ತು ಬಿಸು (ಸೌರಮಾನ ಯುಗಾದಿ) ದಿನ ಟೀಸರ್‌ ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ.

ಪ್ರಸಾದ್ ಪೂಜಾರಿ ಅರ್ವ ಮಾತನಾಡಿ, ಕೊರೊನಾಗಿಂತ ಮೊದಲೇ ಚಿತ್ರೀಕರಣ ಆರಂಭಗೊಂಡ ಚಿತ್ರಕ್ಕೆ ಈಚೆಗೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ಕಿದೆ ಎಂದರು.

ಈ ಸಂದರ್ಭದಲ್ಲಿ ಹೇಮಂತ್ ಸುವರ್ಣ, ಆಕಾಶ್ ರೆಡ್ಡಿ, ಸುರೇಶ್‌ ಶೆಟ್ಟಿ, ಹುಚ್ಚ ವೆಂಕಟ್‌ ಮತ್ತು ಅಭಿಜಿತ್‌ ಇದ್ದರು.