ಬಾಗಲಕೋಟೆ: ಪದವಿ ಪ್ರವೇಶಾತಿಗೆ ಹಣವಿಲ್ಲದೇ ಪರದಾಡುತ್ತಿದ್ದ ಪಿಯುಸಿ ವಿದ್ಯಾರ್ಥಿನಿಗೆ ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಆರ್ಥಿಕ ನೆರವು ನೀಡುವ ಮೂಲಕ ಸಮಾಜಕ್ಕೆ ಮಾದರಿ ಆಗಿದ್ದಾರೆ.
ಬಾಗಲಕೋಟೆ ತಾಲೂಕಿನ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ್ ಎಂಬ ವಿದ್ಯಾರ್ಥಿನಿ ಪಿಯುಸಿಯಲ್ಲಿ 83% ಅಂಕ ಗಳಿಸಿದ್ದಳು. ಉನ್ನತ ಶಿಕ್ಷಣ ಪಡೆಯಬೇಕು ಎಂದು ಕನಸು ಕಂಡಿದ್ದ ಆಕೆಗೆ ಬಡತನ ಹಾಗೂ ಆರ್ಥಿಕ ತೊಂದರೆ ಕಾಡ ತೊಡಗಿತ್ತು. ತಂದೆ ತೀರ್ಥಯ್ಯ ಗ್ರಾಮದಲ್ಲಿ ಚಿಕ್ಕದಾದ ಚಹಾದ ಅಂಗಡಿ ನಡೆಸುತ್ತಿದ್ದು, ಬಂದ ಹಣದಲ್ಲಿ ಕುಟುಂಬ ನಡೆಸುವುದೇ ಕಷ್ಟಕರವಾಗಿತ್ತು.
ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು:
ಮಗಳು ವಿದ್ಯಾಭ್ಯಾಸಕ್ಕೆ ಪರದಾಡುತ್ತಿದ್ದ ಈ ಸಂದರ್ಭದಲ್ಲಿ ಗ್ರಾಮದ ಗುತ್ತಿಗೆದಾರ ಅನಿಲ್ ಹುಣಶಿಕಟ್ಟಿ ಅವರನ್ನು ಜಮಖಂಡಿ ಬಿಎಲ್ಡಿಇ ಸಂಸ್ಥೆಯ ಕಾಲೇಜಿನಲ್ಲಿ ಬಿಸಿಎಗೆ ಸೀಟ್ ಕೊಡಿಸುವಂತೆ ಕೋರಿಕೊಂಡಿದ್ದರು. ಅವರು ಸೀಟ್ ಕೊಡಿಸುವ ಜೊತೆಗೆ ಆರ್ಥಿಕ ನೆರವು ಒದಗಿಸುವುದಕ್ಕೂ ಪ್ರಯತ್ನಿಸುವ ಭರವಸೆ ನೀಡಿದ್ದರು.
ಆಟಗಾರ ಪಂತ್ ಆರ್ಥಿಕ ಸಹಾಯ:
ಅನಿಲ್ ಅವರು ರಿಷಭ್ ಪಂತ್ ಅವರಿಗೆ ಆತ್ಮೀಯರಾಗಿರುವ ಹಿನ್ನೆಲೆ ಈ ವಿಚಾರವನ್ನು ಪಂತ್ ಅವರ ಗಮನಕ್ಕೆ ತಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ಟೀಂ ಇಂಡಿಯಾ ಆಟಗಾರ ಪಂತ್ ಅವರು ಜುಲೈ 17ರಂದು ಬಿಎಲ್ಡಿಇ ಕಾಲೇಜಿನ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಮೂಲಕ ವಿದ್ಯಾರ್ಥಿನಿ ಜ್ಯೋತಿಗೆ ಆರ್ಥಿಕ ಬೆಂಬಲವನ್ನು ನೀಡಿದ್ದಾರೆ.
ಪಂತ್’ಗೆ ಗ್ರಾಮಸ್ಥರಿಂದ ಅಪಾರ ಮೆಚ್ಚುಗೆ:
ಜ್ಯೋತಿಗೆ ಮೊದಲ ಸೆಮಿಸ್ಟರ್ನ ಶುಲ್ಕ 40 ಸಾವಿರ ರೂ. ಹಣವನ್ನು ರಿಷಭ್ ಪಂತ್ ಪಾವತಿಸಿ ಮಾನವೀಯತೆ ಮರೆದ್ದಾರೆ. ಪುಟ್ಟ ಗ್ರಾಮದ ವಿದ್ಯಾರ್ಥಿನಿಗೆ ಯಾವುದೇ ಅಪೇಕ್ಷೆ ಇಲ್ಲದೆ ರಿಷಬ್ ಪಂತ್ ಅವರು ನೆರವಾಗುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದು, ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗ್ತಿದೆ.












