ಬಾಗಲಕೋಟೆ: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರಿಗೆ ದೇಶದ್ರೋಹಿ ಎಂಬ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದು, ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲು ಸಾಧ್ಯವಿಲ್ಲ. ಸೂಲಿಬೆಲೆ ಸಮಾಜಕ್ಕೆ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಸದಾನಂದಗೌಡರು ವೈಯಕ್ತಿಕವಾಗಿ ಹೆಸರು ಹೇಳಿ ಹಾಗೆ ಮಾತಾಡಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲ್ಲ ಎಂದರು.
ಕರ್ನಾಟಕದ ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಇನ್ನೂ ಪರಿಹಾರದ ಹಣ ಬಾರದಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಶ್ರೀಗಳು, ದೇಶದಲ್ಲಿನ ಆರ್ಥಿಕ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬಗ್ಗೆ ಪತ್ರ ಬರೆಯುವುದಾಗಿ ಶ್ರೀಗಳು ಹೇಳಿದ್ದಾರೆ. ಹಣ ಬಿಡುಗಡೆ ಆಗದಿರುವುದು ನಮಗೂ ಕೂಡ ಆತಂಕವಾಗಿದೆ. ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ತಿಳಿದಿಲ್ಲ. ದೇಶದಲ್ಲಿ ಆರ್ಥಿಕ ಕೊರತೆ ಇರಬಹುದು ಆದ್ದರಿಂದ ಬಿಡುಗಡೆ ಮಾಡಿಲ್ಲ ಎಂದನಿಸುತ್ತೆ. ಆದರೆ ಜನತೆ ನಿಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ. ಹೀಗೆ ಅನೇಕ ವಿಚಾರಗಳನ್ನು ಪತ್ರದಲ್ಲಿ ಸೇರಿಸಿದ್ದೇನೆ ಎಂದರು.












