ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹ ಅಭಿಯಾನ; ಶೀಘ್ರವೇ ಚೆನ್ನೈಯಲ್ಲಿ ಉದ್ಯಮಿಗಳ ಸಮಾವೇಶ- ರಾಜೇಶ್ ರಾವ್

ಚೆನ್ನೈ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀ ರಾಮಮಂದಿರ ನಿರ್ಮಾಣಕ್ಕೆ ದೇಶದ ಸಮಸ್ತ ಜನತೆಯ ಸಹಕಾರ ಪಡೆಯುವ ಉದ್ದೇಶದಿಂದ ಜನವರಿ 15 ರಿಂದ ದೇಶಾದ್ಯಂತ ನಿಧಿ ಸಂಗ್ರಹ ಅಭಿಯಾನ ನಡೆಯಲಿದೆ. ಈ ಉದ್ದೇಶಕ್ಕಾಗಿ ತಮಿಳುನಾಡಿನ ಉದ್ಯಮಿಗಳ ಸಮಾವೇಶವನ್ನು ಚೆನ್ನೈ ನಲ್ಲಿ ನಡೆಸಲಾಗುವುದು ಎಂದು ಜಗತ್ಪ್ರಸಿದ್ಧ ವುಡ್ ಲ್ಯಾಂಡ್ಸ್ ಹೋಟೆಲ್ಸ್ ನ ಪಾಲುದಾರ ಕೆ. ರಾಜೇಶ್ ರಾವ್ ( ಮಂಗಳೂರಿನ ಕಡಂದಲೆಯವರು ) ತಿಳಿಸಿದ್ದಾರೆ.

ಚೆನ್ನೈ ಮೈಲಾಪುರದಲ್ಲಿರುವ ವುಡ್ ಲ್ಯಾಂಡ್ಸ್ ಹೋಟೆಲ್ ಅತಿಥಿ ಗೃಹದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ರಾಜೇಶ್, ತಮಿಳುನಾಡಿನ ಸ್ವರ್ಣ, ವಸ್ತ್ರ , ಹೋಟೆಲ್, ರಿಯಲ್ ಎಸ್ಟೇಟ್, ಸಾಫ್ಟ್ ವೇರ್ ಹೀಗೆ ವಿವಿಧ ಉದ್ಯಮಿಗಳ ದೊಡ್ಡ ಸಮೂಹವಿದ್ದು ಅವರೆಲ್ಲರನ್ನು ಸೇರಿಸಿಕೊಂಡು ಒಂದು ದೊಡ್ಡ ಸಮಾವೇಶ ನಡೆಸಲಾಗುವುದು . ಇದರಲ್ಲಿ ಪೇಜಾವರ ಶ್ರೀಗಳು ಭಾಗವಹಿಸಿ ಮಾರ್ಗದರ್ಶನ ನೀಡುವಂತೆ ವಿನಂತಿಸಲಾಗಿದ್ದು ಅವರು ಒಪ್ಪಿಗೆಯನ್ನೂ ಸೂಚಿಸಿದ್ದಾರೆ ಎಂದರು.

ಈ ಸಮಾವೇಶ ದಲ್ಲಿ ಪ್ರತೀ ಉದ್ಯಮಿಗಳೂ ತಮ್ಮ ದೇಣಿಗೆಯನ್ನು ಶ್ರೀಗಳ ಮೂಲಕ ಅಯೋಧ್ಯೆ ಮಂದಿರ ಟ್ರಸ್ಟ್ ಗೆ ಹಸ್ತಾಂತರಿಸುವರು ಎಂದು ಅವರು ತಿಳಿಸಿದ್ದಾರೆ.

ಈ ಸಮಾಲೋಚನಾ ಸಭೆಯಲ್ಲಿ ವುಡ್ ಲ್ಯಾಂಡ್ಸ್ ಸಮೂಹದ ಮತ್ತೋರ್ ಹಿರಿಯರಾದ ಕೆ ಮುರಳಿ ರಾವ್ ತಮಿಳುನಾಡಿನ ಸಂಘ ಪರಿವಾರದ ಪ್ರಮುಖರೂ ಉಪಸ್ಥಿತರಿದ್ದರು.

ಸಂತ ಸಮಾವೇಶ:
ಇದೇ ಉದ್ದೇಶಕ್ಕಾಗಿ ಚೆನ್ನೈನಲ್ಲಿ ತಮಿಳುನಾಡಿನ ನೂರಾರು ಸಾಧು ಸಂತರು , ಮಠಾಧೀಶರು, ಧಾರ್ಮಿಕ ಮುಖಂಡರ ಸಮಾವೇಶವನ್ನೂ ಜನವರಿ ತಿಂಗಳಲ್ಲಿ ಆಯೋಜಿಸಿ ಅವರೆಲ್ಲರ ಮಾರ್ಗದರ್ಶನ ಸಹಕಾರ ಪಡೆಯಲಾಗುವುದು ಎಂದು ತಮಿಳುನಾಡಿನ‌ ಉತ್ತರ ಪ್ರಾಂತ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಶ್ರೀನಿವಾಸನ್ ತಿಳಿಸಿದರು. ಈ ಸಮಾವೇಶದಲ್ಲಿ ಪೇಜಾವರ ಶ್ರೀಗಳು ಭಾಗವಹಿಸುವಂತೆ ವಿನಂತಿಸಿದರು.