ಕೋಟ: ಮಾ.24 ರಂದು ಗಾಯಕಿ ಕೆ.ಎಸ್.ಚಿತ್ರ ಹಾಗೂ ಡಾ.ಸಿ.ಆರ್.ಚಂದ್ರಶೇಖರ್ ಇವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ

ಕೋಟದ: ಮನಸ್ಮಿತ ಫೌಂಡೇಶನ್ ಹಾಗೂ ಗೀತಾನಂದ ಫೌಂಡೇಶನ್ ಮಣೂರು ಹಾಗೂ ಯುವ ಮೆರಿಡಿಯನ್ ಸಹಭಾಗಿತ್ವದಲ್ಲಿ ನೀಡಲ್ಪಡುವ ಡಾ. ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿ 2023 ಹಾಗೂ ಮನಸ್ಮಿತ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮವು ಮಾ.24 ರಂದು ಯುವ ಮೆರಿಡಿಯನ್ ಒಪೆರಾ ಪಾರ್ಕಿನಲ್ಲಿ ನಡೆಯಲಿದೆ.

2023 ನೇ ಸಾಲಿನ ಎಸ್.ಜಾನಕಿ ರಾಷ್ಟ್ರೀಯ ಪ್ರಶಸ್ತಿಗೆ ಭಾರತದ ಖ್ಯಾತ ಗಾಯಕಿ ಪದ್ಮಭೂಷಣ ಕೆ.ಎಸ್.ಚಿತ್ರಾ ಹಾಗೂ ಮನಸ್ಮಿತ ಪುರಸ್ಕಾರಕ್ಕೆ ವೈದ್ಯಕೀಯ ಲೋಕದ ಸಂತ, ಸಾಹಿತಿ ಡಾ.ಸಿ.ಆರ್. ಚಂದ್ರಶೇಖರ್ ಅವರನ್ನು ಆಯ್ಕೆಗೊಳಿಸಲಾಗಿದೆ.

ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರವು ಒಂದು ಲಕ್ಷ ರೂ ನಗದು ಹಾಗೂ ಪ್ರಶಸ್ತಿಯನ್ನು ಒಳಗೊಂಡಿರುತ್ತದೆ. ಹಾಗೂ ಮನಸ್ಮಿತ ರಾಷ್ಟ್ರೀಯ ಪುರಸ್ಕಾರವು ಇಪ್ಪತ್ತೈದು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿಯನ್ನು ಒಳಗೊಂಡಿರುತ್ತದೆ.

ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಸತೀಶ್ ಪೂಜಾರಿ ನೇತೃತ್ವದಲ್ಲಿ ಕರ್ನಾಟಕದ ಶ್ರೇಷ್ಠ ಗಾಯಕ, ಗಾಯಕಿಯರು ಹಾಗೂ ವಾದ್ಯ ವೃಂದದವರಿಂದ ಅದ್ದೂರಿ ಸಂಗೀತ ಸಂಜೆ ಮಾ.24ಕ್ಕೆ ಯುವ ಮೆರಿಡಿಯನ್ ಒಪೆರಾ ಪಾರ್ಕಲ್ಲಿ ಜರಗಲಿದೆ.ಎಲ್ಲರಿಗೂ ಉಚಿತ ಪ್ರವೇಶ ಇರಲಿದೆ ಎಂದು ಮನಸ್ಮಿತ ಫೌಂಡೇಶನ್ ನಿರ್ದೇಶಕ ಡಾ. ಪ್ರಕಾಶ್ ತೋಳಾರ್ ತಿಳಿಸಿದ್ದಾರೆ.