ಅಭಿಷೇಕ್ ಅಂಬರೀಷ್ ಜೊತೆ ಸಪ್ತಪದಿ ತುಳಿದ ಅವಿವಾ ಬಿದ್ದಪ್ಪ

ದಿವಂಗತ ರೆಬಲ್​ ಸ್ಟಾರ್​ ಅಂಬರೀಶ್​ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಮಂಡ್ಯದ ಮರಿ ಗೌಡ ಅಭಿಷೇಕ್​ ಅಂಬರೀಶ್ ಪ್ರೀತಿಸಿದ ಹುಡುಗಿ, ಫ್ಯಾಷನ್ ಡಿಸೈನರ್​ ಅವಿವಾ ಬಿದ್ದಪ್ಪ ಜೊತೆಗೆ ಸಪ್ತಪದಿ ತುಳಿದಿದ್ದಾರೆ.
ಬ್ಯಾಚುರಲ್​ ಲೈಫ್​ಗೆ ಗುಡ್​ ಬೈ ಹೇಳಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗಿನ ಶುಭ ಕರ್ಕಾಟಕ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆದಿದ್ದು, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಪ್ರೀತಿಸಿದ ಜೋಡಿ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಈ ಶುಭಕಾರ್ಯ ನಡೆಯುತ್ತಿದೆ. ​ಒಕ್ಕಲಿಗ ಸಂಪ್ರದಾಯದಂತೆ ಸುಮಲತಾ ಅಂಬರೀಶ್​ ಮಗನ ಮದುವೆಯನ್ನು ನಡೆಸಿದ್ದಾರೆ. ನಟ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಮದುವೆ ಸಮಾರಂಭದ ಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

ಇದೇ ಜೂನ್​ 7 ರಂದು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿಯಲ್ಲಿ ಅದ್ದೂರಿಯಾಗಿ ಅಭಿಷೇಕ್​ ಅಂಬರೀಶ್​ ಮತ್ತು ಅವಿವಾ ಬಿದ್ದಪ್ಪ ಆರತಕ್ಷತೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸುಮಲತಾ ಅವರು ಈಗಾಗಲೇ ಹತ್ತು ಸಾವಿರ ಮಂದಿಗೆ ಆಮಂತ್ರಣ ನೀಡಿದ್ದಾರೆ.
ಆರತಕ್ಷತೆಯಲ್ಲಿ ಭಾಗಿಯಾಗಲಿರುವ ಖ್ಯಾತ ಸೆಲೆಬ್ರಿಟಿಗಳು: ನಾಡಿದ್ದು ನಡೆಯುವ ರಿಸೆಪ್ಶನ್​ಗೆ ಕಾಲಿವುಡ್​ ಸೂಪರ್​ ಸ್ಟಾರ್​ ರಜನಿಕಾಂತ್​, ಮೆಗಾಸ್ಟಾರ್​ ಚಿರಂಜೀವಿ, ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​, ಆರ್​ಆರ್​ಆರ್​ ಖ್ಯಾತಿಯ ರಾಮ್​ ಚರಣ್​ ತೇಜಾ, ಮಾಲಿವುಡ್​ ಸ್ಟಾರ್​ ಮೋಹನ್​ ಲಾಲ್​, ನಾಗ್​ ಬಾಬು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಸಾಕಷ್ಟು ಸಿನಿ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಆಗಮಿಸಲಿದ್ದಾರೆ.
ಇನ್ನೂ ಜೂನ್​ 16 ಕ್ಕೆ ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಅಭಿಷೇಕ್ ಅಂಬರೀಶ್​​ ಮತ್ತು ಅವಿವಾ ಬಿದ್ದಪ್ಪ ಬೀಗರ ಔತಣಕೂಟವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು ಒಂದು ಲಕ್ಷ ಮಂದಿಗೆ ಔತಣಕೂಟ ಏರ್ಪಾಡು ಮಾಡಲಾಗಿದೆ.

ವಿಶೇಷವಾಗಿ ಅಂಬರೀಶ್​ ಅಭಿಮಾನಿಗಳಿಗೆ ಮುಕ್ತ ಅವಕಾಶ ಇದೆ. ಇದರ ಜೊತೆಗೆ ಅಭಿಷೇಕ್​ ಮತ್ತು ಅವಿವಾ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ.
ಅಂಬಿ ಕನಸಿನಂತೆ ನಡೆಯುತ್ತಿರುವ ಶುಭಕಾರ್ಯ: ಅಂಬರೀಶ್​ ಕನಸಿನಂತೆಯೇ ಮದುವೆ ಕಾರ್ಯಗಳು ನಡೆಯುತ್ತಿದೆ. ಅಂಬಿ ಹುಟ್ಟೂರಿನಲ್ಲೇ ಅಭಿಷೇಕ್​ ಮದುವೆಯ ಬೀಗರ ಔತಣಕೂಟ ಮಾಡಬೇಕು ಎಂಬುದು ರೆಬಲ್​ ಸ್ಟಾರ್​ ಆಸೆಯಾಗಿತ್ತು. ಅದರಂತೆ ಅಂಬರೀಶ್​ ಕನಸನ್ನು ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್​ ನನಸು ಮಾಡುತ್ತಿದ್ದಾರೆ. ಇನ್ನು ಅಭಿಷೇಕ್​ ಅಮರ್​ ಸಿನಿಮಾ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.