ವಿದೇಶಕ್ಕೆ ಉದ್ಯೋಗಕ್ಕೆ ತೆರಳುವ ಮುನ್ನ ಎಲ್ಲಾ ಮಾಹಿತಿ ಪಡೆಯಲು ವಲಸೆ ಕೇಂದ್ರದಿಂದ ನೆರವು

ಉಡುಪಿ: ವಿದೇಶಗಳಿಗೆ ಉದ್ಯೋಗ ಅರಸಿ ತೆರಳಿದಾಗ ಅಲ್ಲಿ ಉಂಟಾಗುವ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಲು ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯಿದ್ದಾಗ ಮಾತ್ರ ಅವುಗಳನ್ನು ಎದುರಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹೇಳಿದರು.

ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಜಾರಿಗೊಳಿಸುತ್ತಿರುವ ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಕುರಿತು ಭಾಗೀದಾರಿ ಇಲಾಖೆಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿದೇಶಗಳಿಗೆ ಉದ್ಯೋಗ ಅರಸಿ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಉನ್ನತ ಹುದ್ದೆ ಹಾಗೂ ಕಾರ್ಮಿಕರಾಗಿ ಹೋಗುತ್ತಿದ್ದಾರೆ. ಪರದೇಶಗಳಲ್ಲಿ ಅಲ್ಲಿನ ಕಾನೂನು ಸೇರಿದಂತೆ ಮತ್ತಿತರ ನಿಯಮಗಳ ಬಗ್ಗೆ ಮಾಹಿತಿ ಕೊರತೆಯಿಂದ ಕೆಲವೊಮ್ಮೆ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಗಳಿವೆ ಇವುಗಳನ್ನು ಪರಿಹರಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.

ಅಸಂಘಟಿತ ಕಾರ್ಮಿಕರು ಸಾಗರೋತ್ತರ ಪ್ರದೇಶಗಳಲ್ಲಿ ಕೆಲಸ ಮಾಡಲು ಅನುಕೂಲವಾಗುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯು ಕಾರ್ಮಿಕರಿಗಾಗಿ ಅನೇಕ ಸೇವೆಗಳನ್ನು ಒದಗಿಸಿದ್ದು, ಕಾರ್ಮಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ನಿವೃತ್ತ ಉದ್ಯೋಗ ವಿನಿಮಯ ಅಧಿಕಾರಿ ಹಾಗೂ ಸಮಾಲೋಚಕ ಡಾ.ಕೆ.ವಿ.ಸ್ವಾಮಿ ಮಾತನಾಡಿ, ವಿದೇಶಗಳಲ್ಲಿ ವೃತ್ತಿ ನಿರ್ವಹಿಸುತ್ತಿರುವವರು ಈ ಹಿಂದೆ ಅನೇಕ ರೀತಿಯ ಸಮಸ್ಯೆಗಳಿಗೆ ಒಳಗಾಗಿ ಕಷ್ಟವನ್ನು ಅನುಭವಿಸಿರುವುದನ್ನು ಅರಿತು ಸರ್ಕಾರ ಕಾರ್ಮಿಕರ ಒಳಿತಿಗಾಗಿ ನಿಯಮಾವಳಿಗಳನ್ನು ರೂಪಿಸಿದೆ ಎಂದರು.

ಸರ್ಕಾರದದ ಅಧಿಕೃತ ಸಂಸ್ಥೆಗಳ ಮೂಲಕ ಉದ್ಯೋಗಗಳನ್ನು ನಿರ್ವಹಿಸಲು ಅನ್ಯದೇಶಗಳಿಗೆ ತೆರಳಿದ ಸಂದರ್ಭದಲ್ಲಿ ಕಾನೂನಾತ್ಮಕವಾಗಿ ಎಲ್ಲಾ ರೀತಿಯ ಪರಿಹಾರಗಳನ್ನು ಪಡೆಯಲು ಸಾಧ್ಯ ಆದರೆ ಕೆಲವರು ಖಾಸಗಿ ಸಂಸ್ಥೆಯ ಮಧ್ಯಸ್ಥಿಕೆಯೊಂದಿಗೆ ಹೋಗಿ, ತೊಂದರೆ ಅನುಭವಿಸಿದ್ದಾರೆ ಎಂದರು.

ಅಂತರಾಷ್ಟ್ರೀಯ ವಲಸೆ ಕೇಂದ್ರದ ಕಾರ್ಯಕ್ರಮ ವ್ಯವಸ್ಥಾಪಕಿ ಸಂಗೀತಾ ಅವರು , ವಿದೇಶ ಪ್ರಯಾಣ, ನೇಮಕಾತಿ, ಪೂರ್ವ ನಿರ್ಗಮನ, ವಿದೇಶದಲ್ಲಿ ಕೆಲಸ ಹಾಗೂ ಅಲ್ಲಿಂದ ವಾಪಸಾತಿ ಆಗುವ ಬಗ್ಗೆ ಸವಿವವರ ಮಾಹಿತಿ ನೀಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಮಾತನಾಡಿ, ವಿದೇಶಗಳಲ್ಲಿ ಭಾರತೀಯ ಕಾರ್ಮಿಕರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪರದೇಶಗಳಲ್ಲಿ ವೃತ್ತಿ ನಿರ್ವಹಿಸುವಾಗ ಜಾಗೃತಿ ವಹಿಸುವುದು ಕಾರ್ಮಿಕರ ಆದ್ಯ ಕರ್ತವ್ಯ , ಸರ್ಕಾರ ಇವರುಗಳಿಗೆ ಅನುಕೂಲ ಮಾಡಿಕೊಡಲು ಹಾಗೂ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ವಿವಿಧ ನರ್ಸಿಂಗ್ ಕಾಲೇಜುಗಳ ಪ್ರಾಂಶುಪಾಲರು, ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.