ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ನೊಂದಿಗೆ ಪರಾರಿಯಾಗಿದ್ದ ಆರೋಪಿಯ ಬಂಧನ

ತುಮಕೂರು: ಗುಬ್ಬಿ ತಾಲ್ಲೂಕಿನ ಜಯನಗರದ ಮೇಲುಕೋಟೆ ಕಿಬ್ಬನಹಳ್ಳಿ ಕ್ರಾಸ್ ಎಂಬಲ್ಲಿ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ನೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಜಯನಗರದ ಪೊಲೀಸರು ಬಂಧಿಸಿದ್ದು, ಆತನಿಂದ ಕಳವು ಮಾಡಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ತುಮಕೂರಿನ ರಾಜೀವ್ ಗಾಂಧೀ ನಗರದ ನಿವಾಸಿ ಎಲೆಕ್ರ್ಟೀಷಿಯನ್ ನೌಷಾಧ್ ಪಾಷ (30) ಬಂಧಿತ ಆರೋಪಿ. ಈತ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಕಳವು ಮಾಡಿದ್ದನು.‌ ಅದರೊಂದಿಗೆ ಈತನಿಂದ ₹ 2.98 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ಬೇರೆ ಕಡೆಗಳಲ್ಲಿಯೂ ಇಂತಹದ್ದೇ ಕೃತ್ಯ ಎಸಗಿದ್ದಾನೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ.