ಮಂಗಳೂರು: ಎಂಸಿಸಿ ಬ್ಯಾಂಕಿನ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನಾ ಕಾರ್ಯಕ್ರಮ

ಮಂಗಳೂರು: ಜೂನ್ 10 ರಂದು ಪಿ.ಎಫ್.ಎಕ್ಸ್ ಸಲ್ಡಾನ್ಹಾ ಸ್ಮಾರಕ ಸಭಾಂಗಣದಲ್ಲಿ ಎಂಸಿಸಿ ಬ್ಯಾಂಕಿನ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಕಾರ್ಯಕ್ರಮವು ಜರುಗಿತು. ಕಂಕನಾಡಿ ಶಾಖೆಯ ಸಿಬ್ಬಂದಿ ಪ್ರೇಮ್ ಡಿಸೋಜ ಅವರು ಸಭೆಯ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮವನ್ನು ರಾಕ್ಣೋ ವಾರಪತ್ರಿಕೆಯ ಸಂಪಾದಕ ಫಾ.ರೂಪೇಶ್ ಮಾಡ್ತಾ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಫಾದರ್ ರೂಪೇಶ್ ಮಾಡ್ತಾ, ಕಳೆದ ದಶಕದಲ್ಲಿ ಬ್ಯಾಂಕಿನ ನಿರಂತರ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿ, ಕಳೆದ ದಶಕದಲ್ಲಿ ಬ್ಯಾಂಕ್ ಸಾಧಿಸಿರುವ ಅಗಾಧ ಪ್ರಗತಿಗಾಗಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದರು. ಶಾಖೆಯ ಸಿಬ್ಬಂದಿಗಳ ಅತ್ಯುತ್ತಮ ಸೇವೆಯನ್ನು ಶ್ಲಾಘಿಸಿದ ಅವರು, ಕರಾವಳಿಯ ಅತ್ಯಂತ ನೆಚ್ಚಿನ ಬ್ಯಾಂಕ್‌ಗಳಲ್ಲಿ ಎಂಸಿಸಿ ಒಂದಾಗಿದೆ ಎಂದು ಘೋಷಿಸಲು ಅಪಾರ ಸಂತೋಷವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಶಹ್ತೆ ವಹಿಸಿದ್ದ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಮಾತನಾಡಿ, ಬ್ಯಾಂಕ್ ತನ್ನ ಅಸ್ತಿತ್ವದ 111 ನೇ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲ್ಲಿ ಬ್ಯಾಂಕ್ ಅನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವಲ್ಲಿ ತಮ್ಮ ಸಮರ್ಪಿತ ಪ್ರಯತ್ನಗಳಿಗಾಗಿ ಸಿಬ್ಬಂದಿಯನ್ನು ಶ್ಲಾಘಿಸಿದರು ಮತ್ತು ಕಡಿಮೆ ವೆಚ್ಚದ ಠೇವಣಿಗಳನ್ನು, ಸಾಲಗಳು ಮತ್ತು ಮುಂಗಡಗಳನ್ನು ಹೆಚ್ಚಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ವೈಯಕ್ತಿಕ ಗುರಿಗಳು, ಲಾಕರ್‌ಗಳ ಮಾರ್ಕೆಟಿಂಗ್ ಮತ್ತು ನಿವ್ವಳ ಮೌಲ್ಯವನ್ನು ಸುಧಾರಿಸುವ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರಶಸ್ತಿ ವಿಜೇತ ಸಿಬ್ಬಂದಿಯನ್ನು ಅಭಿನಂದಿಸಿದ ಅವರು, ಇತರ ಸಿಬ್ಬಂದಿ ಸದಸ್ಯರು ಅವರನ್ನು ಅನುಸರಿಸುವಂತೆ ಕಿವಿ ಮಾತು ಹೇಳಿದರು.

ಜನರಲ್ ಮ್ಯಾನೇಜರ್ ಸುನಿಲ್ ಮೆನೆಜಸ್, 2022-23 ಆರ್ಥಿಕ ವರ್ಷದ ಬ್ಯಾಂಕಿನ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು ಮತ್ತು ವಿವಿಧ ನಿಯತಾಂಕಗಳ ಅಡಿಯಲ್ಲಿ ಅತ್ಯುತ್ತಮ ಬೆಳವಣಿಗೆಗೆ ಕಾರಣವಾದ ಅಂಶಗಳನ್ನು ವಿಶ್ಲೇಷಿಸಿದರು. 2023-24 ರ ಗುರಿಯನ್ನು ಪ್ರಸ್ತುತ ಪಡಿಸಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯ ಸಾಲಗಳು ಮತ್ತು ಮುಂಗಡಗಳಿಗೆ ಪ್ರಾಮುಖ್ಯತೆ ನೀಡುವಂತೆ ಹೇಳಿದರು.

ಆಡಳಿತ ಮಂಡಳಿಯ ಅಧ್ಯಕ್ಷ ಅನಿಲ್ ಜೆ ಪತ್ರಾವೋ, ಸಿಬ್ಬಂದಿಗಳ ಅನುಕರಣೀಯ ಕಾರ್ಯನಿರ್ವಹಣೆ, ಸಮರ್ಪಣೆ ಮತ್ತು ಸಹಕಾರಕ್ಕಾಗಿ ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಬ್ಯಾಂಕಿನ ಶ್ರೇಯೋಭಿವೃದ್ದಿಗಾಗಿ ಇನ್ನೂ ಹೆಚ್ಚು ಶ್ರಮಿಸುವಂತೆ ಹೇಳಿದರು.

ಅತ್ಯುತ್ತಮ ವ್ಯಾಪಾರ ಪ್ರದರ್ಶನ ಶಾಖೆಯ ಪ್ರಶಸ್ತಿಗಳನ್ನು ಕಂಕನಾಡಿ ಮತ್ತು ಕುಲಶೇಖರ ಶಾಖೆಗಳು ಪಡೆದುಕೊಂಡವು. ಈ ಶಾಖೆಗಳ ಶಾಖಾ ವ್ಯವಸ್ಥಾಪಕರನ್ನು ಶಾಲು ಹೊದಿಸಿ, ಪುಷ್ಪಗುಚ್ಛ, ಸ್ಮರಣಿಕೆ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. 2022-23ನೇ ಸಾಲಿನಲ್ಲಿ ಅಪಾರ ಸಾಧನೆ ಮಾಡಿದ ಕಂಕನಾಡಿ ಶಾಖೆಯ ಶಾಖಾ ವ್ಯವಸ್ಥಾಪಕಿ ಇಡಾ ಪಿಂಟೋ ಮತ್ತು ಕುಲಶೇಖರ ಶಾಖೆಯ ಶಾಖಾ ವ್ಯವಸ್ಥಾಪಕಿ ವಿಲ್ಮಾ ಜ್ಯೋತಿ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು.

26 ವರ್ಷಗಳ ಕಾಲ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ವರ್ಷದಲ್ಲಿ ನಿವೃತ್ತರಾದ ಪಾಸ್ಕಲ್ ಮ್ಯಾಕ್ಸಿಂ ಡಿಸೋಜ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ವರ್ಷ ಸುವರ್ಣ ಹುಟ್ಟುಹಬ್ಬ ಆಚರಿಸಿಕೊಂಡ ಸಿಬ್ಬಂದಿಯನ್ನು ಅಭಿನಂದಿಸಿ ಪುಷ್ಪಗುಚ್ಛ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್ ಸಹಯೋಗದಲ್ಲಿ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರಿಗೆ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿತ್ತು.

ನಿರ್ದೇಶಕರಾದ ಎಲ್ರಾಯ್ ಕ್ರಾಸ್ಟೊ, ಆಂಡ್ರ್ಯೂ ಡಿಸೋಜಾ, ಡೇವಿಡ್ ಡಿಸೋಜಾ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜಾ, ಮಾರ್ಸೆಲ್ ಡಿಸೋಜಾ, ಡಾ.ಫ್ರೀಡಾ ಎಫ್ ಡಿಸೋಜಾ, ಐರಿನ್ ರೆಬೆಲ್ಲೋ, ಡಾ.ಜೆರಾಲ್ಡ್ ಪಿಂಟೋ, ವೃತ್ತಿಪರ ನಿರ್ದೇಶಕ ಸುಶಾಂತ್ ಸಲ್ಡಾನ್ಹಾ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರೂಜ್, ಅಲ್ವಿನ್‌ಟೇರಿ ಉಪಸ್ಥಿತರಿದ್ದರು.

ಉಡುಪಿ ಶಾಖಾ ಪ್ರಬಂಧಕ ಓವಿನ್ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಎಫ್.ಮಿನೇಜಸ್ ವಂದಿಸಿದರು.