ಉಡುಪಿ: ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಠಾರದಲ್ಲಿ ಸಂಘದ ಅಧ್ಯಕ್ಷ ಕೆ.ನಾರಾಯಣ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘವು ಮಾರ್ಚ್ ನಲ್ಲಿ “ಎ” ಗ್ರೇಡ್ ಅಡಿಟ್ ವರ್ಗೀಕರಣವನ್ನು ಪಡೆದಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 51.30 ಕೋಟಿ ರೂ. ಸಾಲವನ್ನು ವಿತರಿಸಿ, 60.00 ಕೋಟಿ ರೂ. ಸಾಲದ ಹೊರಬಾಕಿಯನ್ನು ಹೊಂದಿದೆ.
91.419 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ 16 ಡಿವಿಡೆಂಡ್ ಅನ್ನು ಘೋಷಿಸಲಾಗಿದೆ. ತ್ವರಿತ ಸೇವೆಯ ಮೂಲಕ ಸದಸ್ಯರ ಹಾಗೂ ಗ್ರಾಹಕರ ಅಶೋತ್ತರಗಳಿಗೆ ಸಂಘ ಸ್ಪಂದಿಸುತ್ತಿದೆ. ಸಂಘದ ಎಲ್ಲಾ ಎ.ವರ್ಗದ ಸದಸ್ಯರಿಗೆ ರೂ.50,000/-ದ ಅಪಘಾತ ಪರಿಹಾರ ಯೋಜನೆಯ ಬಗ್ಗೆ ಜನತಾ ಅಪಘಾತ ವಿಮೆಯನ್ನು ಮಾಡಲಾಗಿದೆ.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಜತ್ತನ್ ಸಂಘದ ಪ್ರಸಕ್ತ ಸಾಲಿನ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕೆ.ರವಿರಾಜ ಹೆಗ್ಡೆ ಇವರನ್ನು ಸಂಘದ ಆಡಳಿತ ಮಂಡಳಿ, ಸರ್ವಸದಸ್ಯರ ಪರವಾಗಿ ಅಭಿನಂದಿಸಲಾಯಿತು. ಸಂಘವು ಸತತ 9 ವರ್ಷಗಳಿಂದ ಶೇ 100 ಸಾಲ ವಸೂಲಾತಿ ಸಾಧನೆಯನ್ನು ಮಾಡಿರುವುದಕ್ಕೆ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಜತ್ತನ್ ಇವರನ್ನು ಅಭಿನಂದಿಸಲಾಯಿತು.
ಎಸ್.ಎಸ್.ಎಲ್ ಸಿ.ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಿರ್ದೇಶಕ ಬಿ.ದಿನೇಶ್ ಪೈ.,ಮನೋಜ್ ಎಸ್.ಕರ್ಕೇರ, ಶ್ರೀಷ ಕೊಡವೂರು, ನವೀನ್ ಶೆಟ್ಟಿ ಮೂಡುಬೆಟ್ಟು, ಪ್ರಕಾಶ್ ಜಿ.ಕೊಡವೂರು, ರತ್ನಾಕರ ಅಮೀನ್, ಸುರೇಶ್ ಶೆಟ್ಟಿ ಮೂಡುಬೆಟ್ಟು, ಎನ್.ಭೋಜ ಕೊಡವೂರು, ಕೆ.ಕಾಳು ಸೇರಿಗಾರ ಕೊಡವೂರು, ಸತೀಶ್ ನಾಯ್ಕ್, ಶ್ರೀಮತಿ ಕುಸುಮಾ ಜಿ.ಪ್ರಭು, ಶ್ರೀಮತಿ ಬಬಿತ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಕೆ.ನಾರಾಯಣ ಬಲ್ಲಾಳ್ ಸ್ವಾಗತಿಸಿ, ಉಪಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ವಂದಿಸಿದರು.

















