ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಬ್ರಹ್ಮಾವರ: ಮಕ್ಕಳನ್ನು ಅಂಕಕ್ಕೆ ಸಮೀತಗೊಳಿಸದೆ, ಅವರಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಸಮಾಜಮುಖಿ ಉದ್ದೇಶ ಬೆಳೆಸಬೇಕು. ಪ್ರಾಮಾಣಿಕ, ಸಾತ್ವಿಕ ಜೀವನದಿಂದ ಸಾರ್ಥಕ ಬದುಕು ಸಾಧ್ಯತೆ ಇದೆ ಎಂದು ಶ್ರೀ ಛಲವಾದಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಬಸವನಾಗಿ ದೇವ ಸ್ವಾಮೀಜಿ ಹೇಳಿದರು.

ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಆಡಳಿತ ಮಂಡಳಿ ಧರ್ಮದರ್ಶಿ ಗೋಕುಲ್‍ದಾಸ್ ಬಾರಕೂರು ಮಾತನಾಡಿ, ದೇವಸ್ಥಾನದ ಚಾಕರಿಗೆ ಮಾತ್ರ ನಮ್ಮ ಸಮಾಜದವರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ನಮ್ಮ ಸಮಾಜದವರನ್ನು ಆಡಳಿತ ಮಂಡಳಿಗೂ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಆಡಳಿತ ಮಂಡಳಿ ಅಧ್ಯಕ್ಷ ಶಿವಪ್ಪ ನಂತೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಡಾ| ಗೋವಿಂದ ಬಾಬು ಪೂಜಾರಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಮಾಜಿ ಅಧ್ಯಕ್ಷ ದಿನಕರ ಬಾಬು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧಕರಾದ ಪುರುಷೋತ್ತಮ ಎ. ಮಂಗಳೂರು, ನವೀನ್ ಚಂದರ್ ಉಡುಪಿ, ಶಾರದಾ ಹಾರಾಡಿ, ಮೋಹನ್ ಕಣ್ಣೂರು, ಕೃಷ್ಣಪ್ಪ ಮಲ್ಲಾರ್, ಕೇಶವ ಎಸ್. ಮಧ್ಯಪದವು, ಶಿವಾನಂದ ತಲ್ಲೂರು, ರೋಹಿತಾಕ್ಷ ಎಸ್.ವಿ., ಶಕೀಲಾ ಶೇಖರ್ ಮುದರಂಗಡಿ, ಸಂಜೀವ ಚೇಳ್ಯಾರ್, ತಾರನಾಥ ಬಜಾಲ್, ಗಣೇಶ್ ಗುಲ್ವಾಡಿ, ಪೂರ್ಣಿಮಾ ಶಂಕರ್ ಮಲ್ಪೆ, ದಿನಕರ ಪಾಂಡೇಶ್ವರ, ಚಂದ್ರಹಾಸ ಅತ್ತಾವರ ಅವರನ್ನು ಗೌರವಿಸಲಾಯಿತು. ಅತಿಥಿಗಳನ್ನು ಸಮ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ನೆರವೇರಿತು.

ಜಾತ್ರಾ ಸಂದರ್ಭ ದೇವಳಕ್ಕೆ ಭೇಟಿ ನೀಡಿದ ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಉದ್ಯಮಿ ಮಿಥುನ್ ರೈ, ವಿನಯ ಕುಮಾರ್ ಸೊರಕೆ ಮತ್ತಿತರರನ್ನು ಆಡಳಿತ ಮಂಡಳಿಯಿಂದ ಗೌರವಿಸಲಾಯಿತು. ಗುರಿಕಾರ ಕಮಲಾಕ್ಷ ಬಾರಕೂರು, ಅರ್ಚಕ ಪ್ರಭಾಕರ ಕಚ್ಚೂರು, ಖಜಾಂಚಿ ಉದಯ ಅಂಚನ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಬಾರಕೂರು ಕಾರ್ಯಕ್ರಮ ನಿರೂಪಿಸಿ, ಶಿವರಾಜ್ ಮಲ್ಲಾರ್ ವಂದಿಸಿದರು.

ದೇವಳದಲ್ಲಿ ಗೆಂಡೋತ್ಸವ, ರಥೋತ್ಸವ ಸಂಭ್ರಮದಿಂದ ಜರಗಿತು.