ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ, ಮೇ 10: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಸಿಖ್ಖ್, ಆಂಗ್ಲೋಇಂಡಿಯನ್ ಹಾಗೂ ಪಾರ್ಸಿ ಜನಾಂಗದ ವಿದ್ಯಾರ್ಥಿಗಳು 2019-20 ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿ.ಇ.ಟಿ) ಹಾಜರಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಕೈಗೊಳ್ಳಲು ನಿಗಮದಿಂದ ವಾರ್ಷಿಕ ಗರಿಷ್ಟ 3.50 ಲಕ್ಷ ರೂ. ಶೇ 2%ರ ಸೇವಾ ಶುಲ್ಕದ ಆಧಾರದ ಮೇಲೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ.

ಈ ಸಂಬಂಧ 2019-20 ನೇ ವರ್ಷದ ವೃತ್ತಿಪರ ಶಿಕ್ಷಣ ಸೇರ ಬಯಸುವ ಜಿಲ್ಲೆಯ ಕುಟುಂಬದ ವಾರ್ಷಿಕ ವರಮಾನ 6 ಲಕ್ಷ ರೂ. ಮಿತಿಯಲ್ಲಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಲು ತಿಳಿಸಲಾಗಿದೆ.

ನಿಗಮದ ವೆಬ್‍ಸೈಟ್ kmdc.kar.nic.in/arivu2 ಲಿಂಕನ್ನು ತೆರೆದು ಆನ್‍ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ, ಪ್ರಿಂಟ್‍ಔಟ್‍ನ್ನು ತೆಗೆದುಕೊಂಡು QR ಕೋಡಿನೊಂದಿಗೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಜೆರಾಕ್ಸ್ ಪ್ರತಿ, ಸಿ.ಇ.ಟಿ ಪರೀಕ್ಷೆ ಪ್ರವೇಶ ಪತ್ರ, ಎಸ್.ಎಸ್.ಎಲ್.ಸಿ ಅಂಕ ಪಟ್ಟಿಯ ದೃಢೀಕೃತ ಪ್ರತಿ, 50 ರೂಪಾಯಿಯ ಇ-ಸ್ಟ್ಯಾಂಪ್‍ನೊಂದಿಗೆ ಇಂಡಿಮ್ನಿಟಿ ಬಾಂಡ್, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ ಇವುಗಳನ್ನು ನೇರವಾಗಿ ಜಿಲ್ಲಾ ಕಛೇರಿಗೆ ಸಲ್ಲಿಸಬೇಕು. ಅಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ಸಿ.ಇ.ಟಿಗೆ ಪಾವತಿಸಬೇಕಾದ ಶುಲ್ಕವನ್ನು ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೊಂದಾಣಿಕೆ ಮಾಡಲಾಗುತ್ತದೆ. ದಾಖಲಾತಿಯೊಂದಿಗೆ  ಆನ್‍ಲೈನ್‍ನಲ್ಲಿ  ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ), ರಜತಾದ್ರಿ, ಜಿಲ್ಲಾಧಿಕಾರಿಗಳ ಸಂಕೀರ್ಣ, ಮಣಿಪಾಲ ಉಡುಪಿ ಇವರನ್ನು ಸಂಪರ್ಕಿಸುವಂತೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.