ಧಾರ್ಮಿಕ ಕಾರ್ಯಕ್ರಮಗಳಿಗೆ ಅಗರಬತ್ತಿಗಳನ್ನು ಬಳಸೋದು ಎಲ್ಲೆಡೆ ಮಾಮೂಲು. ಕೆಲವರು ಮನೆ ಮನಸ್ಸು ಪರಿಮಳವಾಗಿರಲಿ ಎನ್ನುವ ಕಾರಣಕ್ಕೂ ಊದುಬತ್ತಿಗಳನ್ನು ಹಚ್ಚಿಡುತ್ತಾರೆ. ಆದರೆ ಊದುಬತ್ತಿಯ ಹೊಗೆಯ ಬಗ್ಗೆ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದ್ದು ಇದರಲ್ಲಿ ಊದುಬತ್ತಿ ಆರೋಗ್ಯದ ಮೇಲೆ ಗಂಭೀರಾದ ಪರಿಣಾಮ ಬೀರುತ್ತೆ ಎನ್ನುವ ಬಗ್ಗೆ ವೈಜ್ಞಾನಿಕ ಅಂಶ ಸಾಬೀತಾಗಿದೆ. ಹೌದು. ದಕ್ಷಿಣ ಚೀನಾದ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ಅಧ್ಯಯನವು, ಅಗರಬತ್ತಿಯ ಹೊಗೆಯು ಸಿಗರೇಟ್ ಧೂಮಕ್ಕಿಂತಲೂ ಹೆಚ್ಚು ವಿಷಕಾರಿ ಎನ್ನುವ ಆತಂಕಕಾರಿ ಮಾಹಿತಿ ದೊರೆತಿದೆ.

ಅಂತದ್ದೇನಿದೆ ಅಗರಬತ್ತಿಯಲ್ಲಿ?
ಅಗರಬತ್ತಿ ಹೊಗೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ಸಂಯುಕ್ತಗಳಿರವುದನ್ನು ಕಂಡುಹಿಡಿದಿದೆ ಅಧ್ಯಯನ. ಅಗರಬತ್ತಿಯ ಹೊಗೆಯು ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಡೈಆಕ್ಸೈಡ್, ಫಾರ್ಮಾಲ್ಡಿಹೈಡ್ ಮತ್ತು ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳಂತಹ (PAHs) ವಿಷಕಾರಿ ರಾಸಾಯನಿಕಗಳಿವೆಯಂತೆ.ಇದರಿಂದ ಅಸ್ತಮಾ, ಕ್ರಾನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (COPD) ಮತ್ತು ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ಗೂ ಕಾರಣವಾಗುವ ಅಂಶಗಳಿವೆಯಂತೆ.
ಈ ಕುರಿತು 2015ರಲ್ಲಿ ನಡೆದ ಒಂದು ಅಧ್ಯಯನವು ಅಗರಬತ್ತಿಯ ಹೊಗೆಯು ಮ್ಯೂಟಾಜೆನಿಕ್, ಸೈಟೊಟಾಕ್ಸಿಕ್ ಮತ್ತು ಜೆನೋಟಾಕ್ಸಿಕ್ ಗುಣಗಳನ್ನು ಹೊಂದಿದ್ದು, ಜೀವಕೋಶಗಳ ಡಿಎನ್ಎಯಲ್ಲಿ ಬದಲಾವಣೆಯನ್ನು ಉಂಟುಮಾಡಿ ಕ್ಯಾನ್ಸರ್ಗೆ ದಾರಿಮಾಡಿಕೊಡಬಹುದು ಎಂದು ಹೇಳಿತ್ತು.
ಅಗರಬತ್ತಿ ಹೊಗೆಯಿಂದ ಏನೆಲ್ಲಾ ಸಮಸ್ಯೆಗಳು?
ಈ ಹೊಗೆಯಲ್ಲಿನ ಅತೀ ಸೂಕ್ಷ್ಮ ಕಣಗಳೆಲ್ಲಾ ಗಾಳಿಯಲ್ಲಿ ಹರಡಿ, ಶ್ವಾಸಕೋಶದಲ್ಲಿ ಸಿಕ್ಕಿಹಾಕಿಕೊಂಡು ಉರಿಯೂತದ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತದೆ. ಇದರಿಂದ ಶ್ವಾಸಕೋಶದ ಉರಿಯೂತ, ತಲೆನೋವು, ಮೈಗ್ರೇನ್, ಒತ್ತಡ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಮಕ್ಕಳು, ವಯಸ್ಸಾದವರು ಮತ್ತು ಶ್ವಾಸಕೋಶದ ಕಾಯಿಲೆಯಿಂದ ಬಳಲುವವರಿಗೆ ಈ ಧೂಮವು ಇನ್ನಷ್ಟು ಮಾರಕ. ಹಾಗಾಗಿ ಗಾಳಿಯಾಡದ ಮನೆಯ ಒಳಾಂಗಣದಲ್ಲಿ ಅಗರಬತ್ತಿಯನ್ನು ದೀರ್ಘಕಾಲ ಬಳಸುವುದು ಆರೋಗ್ಯಕ್ಕೆ ಗಂಭೀರ ಹಾನಿ ಉಂಟು ಮಾಡುತ್ತದೆ.
ಅಗರಬತ್ತಿಯ ಹೊಗೆ ಒಳಾಂಗಣ ಗಾಳಿಯ ಗುಣಮಟ್ಟವನ್ನು ಕೆಡಿಸುತ್ತದೆ. ಇದರಲ್ಲಿರುವ ಸೂಕ್ಷ್ಮ ಕಣಗಳು ಶ್ವಾಸಕೋಶದ ಒಳಹೋಗಿ, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಉಸಿರಾಟದ ತೊಂದರೆಗಳು ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ದೀರ್ಘಕಾಲ ಈ ಹೊಗೆ ಸೇವಿಸುವವರು ಶ್ವಾಸಕೋಶದ ಕಾರ್ಯಕ್ಷಮತೆ ಕಡಿಮೆಯಾಗುವುದು. ಈ ಅಪಾಯಗಳು ಸಿಗರೇಟ್ ಹೊಗೆಗೆ ಸಮನಾದ ಅಥವಾ ಕೆಲವು ಸಂದರ್ಭಗಳಲ್ಲಿ ಅದಕ್ಕಿಂತಲೂ ಗಂಭೀರವಾಗಿರಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಪರಿಹಾರವೇನು?
ಇದಕ್ಕೆ ಪರಿಹಾರೇನೆಂದರೆ ಅಗರಬತ್ತಿ ಬಳಕೆ ಆದಷ್ಟು ಕಡಿಮೆ ಮಾಡುವುದು. ಗಾಳಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಗಾಳಿ ಶುದ್ಧೀಕರಣ ಯಂತ್ರಗಳನ್ನು ಬಳಸುವುದು, ಜನರು ಇರುವ ಸ್ಥಳದಲ್ಲಿ ಅಗರಬತ್ತಿಯನ್ನು ಉರಿಸದಿರುವುದು, ಸಾಧ್ಯವಾದಷ್ಟು ನೈಸರ್ಗಿಕ ವಾತಾಯನಕ್ಕೆ ಆದ್ಯತೆ ನೀಡುವುದು ಉತ್ತಮ ಎನ್ನುತ್ತಾರೆ ತಜ್ಞರು. ರಾಸಾಯನಿಕ-ಮುಕ್ತ ಅಗರಬತ್ತಿಗಳನ್ನು ಆಯ್ಕೆ ಮಾಡುವುದು, ಪರ್ಯಾಯವಾಗಿ ಸುಗಂಧ ದೀಪಗಳು ಅಥವಾ ಎಸೆನ್ಷಿಯಲ್ ಆಯಿಲ್ ಡಿಫ್ಯೂಸರ್ಗಳನ್ನು ಬಳಸುವುದು ಸದ್ಯದ ಪರಿಹಾರ. ಹೊಗೆಯಿಂದಲೂ ಎಷ್ಟೊಂದೆಲ್ಲಾ ಸಮಸ್ಯೆಗಳು ಆರೋಗ್ಯದ ಮೇಲಾಗುತ್ತೆ ಎನ್ನುವುದಕ್ಕೆ ಈ ಅಧ್ಯಯನ ಒಳ್ಳೆಯ ಸಾಕ್ಷಿ.












