ಜುಲೈ 5ರಿಂದ ರಾಜ್ಯಾದ್ಯಂತ ಪ್ರತಿ ಭಾನುವಾರ ಲಾಕ್ ಡೌನ್: ಕರ್ಫ್ಯೂ ಅವಧಿ ಕೂಡ ವಿಸ್ತರಣೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಇಂದು ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ಕೆಲವೊಂದು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈ ಕೆಳಗಿನಂತಿವೆ.

ಜುಲೈ 5ನೇ ತಾರೀಖಿನಿಂದ ಮುಂದಿನ ಆದೇಶದವರೆಗೆ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್‍ಡೌನ್ ಮಾಡಲಾಗುವುದು. (ವಸ್ತುಗಳ ಸಾಗಾಣಿಕೆಗೆ ನಿರ್ಬಂದವಿಲ್ಲ).

ಜುಲೈ 10ನೇ ತಾರಿಖಿನಿಂದ ಒಂದು ತಿಂಗಳ ಕಾಲ ಈಗಾಗಲೇ ರಜೆಯಿರುವ 2ನೇ ಹಾಗೂ 4ನೇ ಶನಿವಾರದ ಜೊತೆಗೆ ಉಳಿದ ಶನಿವಾರದಂದು ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯಕ್ಕೊಳಪಡುವ ಎಲ್ಲಾ ಕಛೇರಿಗಳಿಗೆ ರಜೆ ಘೋಷಿಸಲು ತೀರ್ಮಾನಿಸಲಾಯಿತು.

ಪ್ರತಿ ದಿನ ರಾತ್ರಿ 9.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಈಗಾಗಲೇ ಇರುವ ಕಫ್ರ್ಯೂ ಅವಧಿಯ ಬದಲಾಗಿ ರಾತ್ರಿ 8.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಕಫ್ರ್ಯೂ ಅವಧಿಯನ್ನು ಬದಲಾಯಿಸಲು ತೀರ್ಮಾನಿಸಲಾಯಿತು.

ಬೆಂಗಳೂರಿನಲ್ಲಿರುವ ಬೃಹತ್ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗಳಲ್ಲಿ ಆಗುವ ಜನದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ಹೆಚ್ಚಿನ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗಳನ್ನು ತೆರೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚಿಸಲಾಯಿತು.

ಕೋವಿಡ್-19 ಸೋಂಕಿತ ರೋಗಿಗಳನ್ನು ಶೀಘ್ರವಾಗಿ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಲು (ಸೆಂಟ್ರಲೈಜ್ ಬೆಡ್ ಅಲೋಕೇಷನ್ ಸಿಸ್ಟಮ್) ತಂತ್ರಾಂಶದ ಮೂಲಕ ಜಾರಿಗೊಳಿಸಲಾಗುವುದು.

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯೂಲೆನ್ಸ್ ಸಂಖ್ಯೆಗಳನ್ನು 250ಕ್ಕೆ ಹೆಚ್ಚಿಸಲು ಮತ್ತು ಕೋವಿಡ್‍ನಿಂದ ಮೃತರಾದ ದೇಹಗಳನ್ನು ಸಾಗಿಸಲು ಪ್ರತ್ಯೇಕ ಅಂಬ್ಯೂಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಅಂಬ್ಯೂಲೆನ್ಸ್ ಇರುವ ಸ್ಥಳವನ್ನು ಗುರುತಿಸಲು ಮತ್ತು ಅವುಗಳ ಸರಳ ಚಲನವಲನಗಳ ಸಲುವಾಗಿ ಪೊಲೀಸ್ ಕಂಟ್ರೋಲ್ ರೂಂ ವೈರ್‍ಲೆಸ್ ಸೇವೆಯನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ.

ಕೋವಿಡ್-19 ರ ನಿಯಂತ್ರಣದಲ್ಲಿ ಕೆಲಸ ಮಾಡುವ ಎಲ್ಲಾ ನೋಡಲ್ ಅಧಿಕಾರಿಗಳ ವಿವರಗಳನ್ನು ಪತ್ರಿಕೆಗಳ ಜಾಹಿರಾತು ಮುಖಾಂತರ ಸಾರ್ವಜನಿಕರಿಗೆ ಪ್ರಚುರಪಡಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಬಿ.ಬಿ.ಎಂ.ಪಿ ಕೇಂದ್ರ ಕಛೇರಿ ಹಾಗೂ ಆಯುಕ್ತರ ಮೇಲೆ ಇರುವ ಕೆಲಸದ ಹೊರೆಯನ್ನು ಕಡಿಮೆಗೊಳಿಸಲು ಬಿ.ಬಿ.ಎಂ.ಪಿ ಯಲ್ಲಿನ 08 ವಲಯಗಳ ಜಂಟಿ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಕೆಲಸಗಳನ್ನು ನೀಡಲು ಮತ್ತು ಅವರ ಜೊತೆಗೆ ಕೆಲಸ ಮಾಡಲು ಕೆ.ಎ.ಎಸ್ ಅಧಿಕಾರಿಗಳನ್ನು ನಿಯೋಜಿಸಲು ತೀರ್ಮಾನಿಸಲಾಯಿತು.

ಡಾಕ್ಟರ್‍ಗಳ ಕೊರತೆಯನ್ನು ನೀಗಿಸಲು ಕಾರ್ಮಿಕ ಇಲಾಖೆಯಿಂದ ನೇಮಕವಾಗಿರುವ 180 ಎ.ಎಸ್.ಐ ಡಾಕ್ಟರ್‍ಗಳನ್ನು ಕೋವಿಡ್ ಕರ್ತವ್ಯಕ್ಕೆ ಬಳಸಿಕೊಳ್ಳಲು ಮತ್ತು ಪರೀಕ್ಷಾರ್ತಿ ತಹಶೀಲ್ದಾರ್‍ಗಳನ್ನು ಕೋವಿಡ್ ಆಸ್ಪತ್ರೆಗಳು/ಕೇರ್ ಸೆಂಟರ್‍ಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ಹಾಕಲು ಸೂಚಿಸಲಾಯಿತು.

ಬೆಂಗಳೂರಿನಲ್ಲಿ ಲಭ್ಯವಿರುವ ಕಲ್ಯಾಣ ಮಂಟಪಗಳು, ಹಾಸ್ಟೆಲ್‍ಗಳು ಹಾಗೂ ಇನ್ನಿತರೆ ಸಂಸ್ಥೆಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಮೀಸಲಿಡಲು ಹಾಗೂ ರೈಲ್ವೆ ಇಲಾಖೆಯಿಂದ ಬೆಡ್‍ಗಳ ಕೋಚ್‍ನ್ನು ಪಡೆಯಲು ಅವಶ್ಯ ಕ್ರಮ ಜರುಗಿಸಲು ಸೂಚಿಸಲಾಯಿತು.

ಕೋವಿಡ್‍ನಿಂದ ಮೃತರಾದ ದೇಹಗಳ ಅಂತ್ಯಕ್ರಿಯೆಯನ್ನು ಜರುಗಿಸಲು ಪ್ರತ್ಯೇಕ ತಂಡಗಳನ್ನು ರಚಿಸುವುದು ಹಾಗೂ ದೇಹಗಳ ಅಂತ್ಯಕ್ರಿಯೆಯ ಸಲುವಾಗಿ ಇನ್ನೂ ಹೆಚ್ಚಿನ ಜಾಗಗಳನ್ನು ಗುರುತಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ತೀರ್ಮಾನಿಸಲಾಯಿತು.

ಮೆಡಿಕಲ್ ಕಾಲೇಜ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‍ಗಳ ಪೈಕಿ ಶೇ.50 ರಷ್ಟನ್ನು ಕೋವಿಡ್ ರೋಗಿಗಳ ಸಲುವಾಗಿ ಮೀಸಲಿಡಲು ಬಿ.ಬಿ.ಎಂ.ಪಿ ಆಯುಕ್ತರಿಗೆ ಸೂಚಿಸಲಾಯಿತು.

ಆಸ್ಪತ್ರೆಗಳಲ್ಲಿ ಬೆಡ್‍ಗಳು ಪೂರ್ತಿಯಾದ ನಂತರ ರೋಗಿಗಳನ್ನು ಹೋಟೆಲ್‍ಗಳಲ್ಲಿ ಕೊಠಡಿಗಳನ್ನು ಚಿಕಿತ್ಸೆಗಾಗಿ ಬಳಸಿಕೊಳ್ಳುವ ಉದ್ದೇಶದಿಂದ ಹೋಟೆಲ್‍ಗಳನ್ನು ಆಸ್ಪತ್ರೆಗಳಿಗೆ ಟೈಯಪ್ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಬಿ.ಬಿ.ಎಂ.ಪಿ ಆಯುಕ್ತರಿಗೆ ಸೂಚಿಸಲಾಯಿತು.