ನಿರ್ಭಯಾ ಕೇಸ್ ನಲ್ಲಿ ಸೋತು ಸುಣ್ಣವಾಗಿದ್ದ ವಕೀಲನಿಂದ ಹತ್ರಾಸ್ ಆರೋಪಿಗಳ ಪರ ವಕಾಲತ್ತು

ನವದೆಹಲಿ: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ಪರ ಹೋರಾಟ ನಡೆಸಿ ಸೋತು ಸುಣ್ಣವಾಗಿರುವ ವಕೀಲ ಎ ಪಿ ಸಿಂಗ್, ಇದೀಗ ಹತ್ರಾಸ್ ಸಾಮೂಹಿಕ ಅತ್ಯಾಚಾರದ ನಾಲ್ವರು ಆರೋಪಿಗಳ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸುತ್ತಿದ್ದಾರೆ.

ಹತ್ರಾಸ್ ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ಎಪಿ ಸಿಂಗ್ ಅವರನ್ನು ಮೇಲ್ಜಾತಿಯ ಗುಂಪು ಅಖಿಲ್ ಭಾರತೀಯ ಕ್ಷತ್ರಿಯ ಮಹಾಸಭಾ ನೇಮಕ ಮಾಡಿದೆ.

ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ಎಸ್. ಬೊಬ್ಡೆ ನೇತೃತ್ವದ ನ್ಯಾಯಪೀಠ ನಾಳೆ ಕೈಗೆ ತೆಗೆದುಕೊಳ್ಳಲಿದೆ.

ವಿಚಾರಣೆ ಸ್ಥಳವನ್ನು  ಉತ್ತರ ಪ್ರದೇಶದಿಂದ ದೆಹಲಿಗೆ ಬದಲಾಯಿಸುವಂತೆಯೂ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.