ಖಾತೆ ಹಂಚಿಕೆ ವಿಚಾರ; ಗೊಂದಲ ‌ಬಗೆಹರಿಸಲು ಪಕ್ಷದ ಆಂತರಿಕ ವ್ಯವಸ್ಥೆ ಇದೆ: ಸುನಿಲ್ ಕುಮಾರ್ 

ಉಡುಪಿ: ಬಿಜೆಪಿಯಲ್ಲಿ ಖಾತೆ ಹಂಚಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಬೇಸರಗೊಂಡ ಸಚಿವರನ್ನು ಮುಖ್ಯಮಂತ್ರಿ ಅವರು ಕರೆದು ಮಾತನಾಡುತ್ತಾರೆ. ಸಮಸ್ಯೆ ಬಗೆಹರಿಸಲು ಬಿಜೆಪಿಯಲ್ಲಿ ಆಂತರಿಕ ವ್ಯವಸ್ಥೆ ಇದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಸೋಮವಾರ ಮಾಧ್ಯಮದ ಜತೆ ಮಾತನಾಡಿದರು.
ದೇವೇಗೌಡರು ಹಾಗೂ ಸಿಎಂ ಬೊಮ್ಮಾಯಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರ ಜೊತೆಗೂ ಕೂಡ ಫ್ರೆಂಡ್ಶಿಪ್ ಇರಬಹುದು, ಆದರೆ ಅದರಿಂದಾಗಿ ಬದ್ಧತೆ ಮತ್ತು ಕಾರ್ಯಶೈಲಿಯಲ್ಲಿ ವ್ಯತ್ಯಾಸಗಳು ಆಗಬಾರದು ಎಂದರು.
ಇಲಾಖೆಯ ಹಿತಾಸಕ್ತಿ ಕಾಪಾಡುತ್ತೇವೆ…
ದೇಶಾದ್ಯಂತ ನಾಳೆ ವಿದ್ಯುತ್ ನೌಕರರು  ಇಲಾಖೆಯ ಖಾಸಗೀಕರಣದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಮುಷ್ಕರದ ‌ಕುರಿತಾಗಿ ಕೆಪಿಟಿಸಿಎಲ್ ಕಾರ್ಮಿಕ ಸಂಘಟನೆಗಳು ಈಗಾಗಲೇ ನನಗೆ ಭೇಟಿಯಾಗಿವೆ. ಆದರೆ ನಾನು ಶುಕ್ರವಾರ ಅಥವಾ ಶನಿವಾರ ಇಲಾಖೆಯ ಅಧಿಕಾರ ವಹಿಸಿಕೊಳ್ಳಲಿದ್ದೇನೆ. ನಮ್ಮರಾಜ್ಯ ಮತ್ತು ಇಲಾಖೆಯ ಹಿತಾಸಕ್ತಿಯನ್ನು ನಾವು ಕಾಪಾಡುತ್ತೇವೆ. ಜತೆಗೆ ಕೇಂದ್ರದ ಬಿಲ್ ಏನಿದೆ ಎಂಬುದನ್ನು ಪರಾಮರ್ಶಿಸುತ್ತೇನೆ
ಅಧಿಕಾರ ವಹಿಸಿಕೊಂಡ ಅನಂತರ ನಾನು ಈ‌ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಚಿವ ಸುನಿಲ್‌ ಕುಮಾರ್ ತಿಳಿಸಿದ್ದಾರೆ.