ಉಡುಪಿಯಲ್ಲಿ ಎಸಿಬಿ ದಾಳಿ: ಸಣ್ಣ ನೀರಾವರಿ ಅಧಿಕಾರಿ ಹರೀಶ್ ಖಜಾನೆಯಲ್ಲಿ 1.5 ಕೆಜಿ ಚಿನ್ನ, ಮುಕ್ಕಾಲು ಕೆಜಿ ಬೆಳ್ಳಿ!

ಉಡುಪಿ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಉಪವಿಭಾಗ ಇಲಾಖೆಯ ಸಹಾಯಕ ಅಭಿಯಂತರ ಹರೀಶ್ ಅವರ ಕೊರಂಗ್ರಪಾಡಿಯ ಬೈಲೂರು ನಿವಾಸಕ್ಕೆ ಶುಕ್ರವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಹರೀಶ ಖಜಾನೆಯಲ್ಲಿ 1.5 ಕೆಜಿ ಚಿನ್ನ, ಮುಕ್ಕಾಲು ಕೆಜಿ ಬೆಳ್ಳಿ ಪತ್ತೆಯಾಗಿದೆ.

ಇದರ ಜೊತೆಗೆ ಇನ್ನೋವಾ, ಆಲ್ಟೋ ಕಾರುಗಳು ಹಾಗೂ 2 ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. 4.30 ಲ.ರೂ ನಗದು ಹಾಗೂ ಹಲವಾರು ದಾಖಲೆ ಪತ್ರಗಳು ಅಧಿಕಾರಿಗಳಿಗೆ ದೊರೆತಿವೆ. ಹಾವಂಜೆ ಮತ್ತು ಪೆರ್ಡೂರಿನಲ್ಲಿ ಪತ್ನಿಯ ಹೆಸರಿನಲ್ಲಿ 5 ಸರ್ವೆ ನಂಬ್ರದಲ್ಲಿ 2 ನಿವೇಶನಗಳಿರುವ ದಾಖಲೆ ಲಭ್ಯವಾಗಿದೆ.

ಬ್ಯಾಂಕಿನ ಎಫ್ ಡಿ ಖಾತೆಗಳ ಬಗ್ಗೆಯೂ ಮಾಹಿತಿ ದೊರೆತಿದ್ದು, ಬ್ಯಾಂಕಿನಲ್ಲಿರುವ ಒಟ್ಟು ನಗದಿನ ಬಗ್ಗೆ ತನಿಖೆ ನಡೆಯುತ್ತಿದೆ. ಕೊರಂಗ್ರಪಾಡಿಯ ಹರೀಶ್ ಅವರ ಮನೆಯಲ್ಲಿ ಎಸಿಬಿ ತನಿಖೆ ಮುಂದುವರಿದಿದೆ.

ಡಿವೈಎಸ್ಪಿ ಮಂಜುನಾಥ ಕವರಿ, ಇನ್ಸ್ಪೆಕ್ಟರ್ ಸತೀಶ್ ಜಿ.ಜೆ, ರಫೀಕ್ ಎಂ, ಸಿಬ್ಬಂದಿಗಳಾದ ಯತಿನ್ ಕುಮಾರ್, ಪ್ರಸನ್ನ ದೇವಾದಿಗ, ರವೀಂದ್ರ ಗಾಣಿಗ, ಅಬ್ದುಲ್ ಜಲಾಲ್, ಅಬ್ದುಲ್ ಲತೀಫ್, ರಾಘವೇಂದ್ರ ಹೊಸಕೋಟೆ, ಸೂರಜ್ ಕಾಪು, ರಮೇಶ್ ಭಂಡಾರಿ ಹಾಗೂ ಪ್ರತಿಮಾ ದಾಳಿಯಲ್ಲಿ ಭಾಗವಹಿಸಿದ್ದರು.