ಉಡುಪಿ ತುಳುಕೂಟದಿಂದ ಆಟಿದ ತಿರ್ಲ್-2025″ ವಿನೂತನ ಕಾರ್ಯಕ್ರಮ

ಉಡುಪಿ: ತುಳುಕೂಟ ಉಡುಪಿ ಇದರ ಆಶ್ರಯದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ “ಆಟಿದ ತಿರ್ಲ್-2025” ಎಂಬ ವಿನೂತನ ಕಾರ್ಯಕ್ರಮವನ್ನು ಉಡುಪಿ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಇಂದು ಆಯೋಜಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳುನಾಡಿನ ಆಚಾರ- ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಬಹಳ ಅಗತ್ಯ ಎಂದರು.

ಹಿಂದಿನ‌ ಕಾಲದಲ್ಲಿ ಆಟಿ ತಿಂಗಳು ಎಂದರೆ ಬಹಳ ಕಷ್ಟದ ದಿನಗಳು. ಆ ಸಂದರ್ಭದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಸ್ಥಿತಿ ಇತ್ತು. ಅಂದು ನಮ್ಮ ಹಿರಿಯರು ಸುತ್ತಮುತ್ತಲು ಸಿಗುವ ಸೊಪ್ಪು, ತರಕಾರಿ, ಗೆಡ್ಡೆಗೆಣಸುಗಳನ್ನು ತಿಂದು ದಿನ ಕಳೆಯುತ್ತಿದ್ದರು. ಆದರೆ ಇಂದಿನ ಯುವಪೀಳಿಗೆಗೆ ನಮ್ಮ ಹಿರಿಯರ ಕಷ್ಟದ ದಿನಗಳ ಬಗ್ಗೆ ಗೊತ್ತಿಲ್ಲ. ಇಂದು ಬಹುತೇಕರು ಸುಖದ ಜೀವನವನ್ನೇ ನೋಡುತ್ತಿದ್ದಾರೆ. ಆದ್ದರಿಂದ ಇಂದಿನ ಯುವ ಪೀಳಿಗೆಗೆ ತುಳುನಾಡಿನ ಸಂಸ್ಕೃತಿ, ಹಿರಿಯರು ಯಾವ ರೀತಿ ಜೀವನ ನಡೆಸುತ್ತಿದ್ದರು ಎಂಬುವುದರ ಬಗ್ಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ನಾಟಿ ವೈದ್ಯೆ ಕಮಲ ಮಡಿವಾಳ ಅವರನ್ನು ಸಮ್ಮಾನಿಸಲಾಯಿತು.

ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಆಟಿದ ತಿರ್ಲ್ ಸಂಚಾಲಕರಾದ ತಾರಾ ಸತೀಶ್, ಪೂರ್ಣಿಮಾ ಶೆಟ್ಟಿ, ತೆಂಕನಿಡಿಯೂರು ಕಾಲೇಜಿನ ವಿದ್ಯಾರ್ಥಿನಿ ಶರಣ್ಯ, ಶಿರ್ವ ಎಂಎಸ್ ಆರ್ ಎಸ್ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಸ್ ಮತ್ತು ಅನೀಶಾ ಭಂಡಾರಿ, ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಕೃತಿ ಮೂಡಬೆಟ್ಟು, ವಿದ್ಯೋದಯ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಭವನಾ, ನಿರಾಲಿ ಮತ್ತು ತ್ರಿಷಾ ಪಿಯು ಕಾಲೇಜಿನ ಅನ್ಯ ಆಚಾರ್ಯ ಉಪಸ್ಥಿತರಿದ್ದರು.ಯಶೋದ ಕೇಶವ್ ಕಾರ್ಯಕ್ರಮ ನಿರೂಪಿಸಿದರು‌.