‘ಆರಾಮ್​ ಅರವಿಂದ್​ ಸ್ವಾಮಿ’ ಚಿತ್ರ : ಮುಂದಿನ ವರ್ಷ ತೆರೆ

ಅಭಿಷೇಕ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಿಲನಾ ನಾಗರಾಜ್ ಹಾಗೂ ಹೃತಿಕ​ ಶ್ರೀನಿವಾಸ್ ನಾಯಕಿಯರಾಗಿ ನಟಿಸಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್​ ಕೆಲಸದಲ್ಲಿ ಬ್ಯುಸಿಯಾಗಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರದ ಬಗ್ಗೆ ಸಿನಿಮಾತಂಡ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದೆ.ಕನ್ನಡ ಚಿತ್ರರಂಗದಲ್ಲಿ ಫಸ್ಟ್ ಲುಕ್ ಹಾಗೂ ಪ್ರಮೋಷನಲ್ ವಿಡಿಯೋ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಚಿತ್ರ ‘ಆರಾಮ್ ಅರವಿಂದ್ ಸ್ವಾಮಿ’.ಅಭಿಷೇಕ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಕಾಂಬೋದಲ್ಲಿ ಮೂಡಿಬರುತ್ತಿರುವ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರ ಮುಂದಿನ ವರ್ಷ ತೆರೆ ಕಾಣಲಿದೆ.

ನಂತರ ನಟಿ ಮಿಲನಾ ನಾಗರಾಜ್ ಮಾತನಾಡಿ, “ಆರಾಮ್ ಅರವಿಂದ್ ಸ್ವಾಮಿ ಸಿನಿಮಾದ ಕಥೆಯನ್ನು ಅಭಿಷೇಕ್ ಅವರು ಬಂದು ಕಥೆ ಹೇಳಿದರು. ಅನೀಶ್ ಅವರ ಜೊತೆ ಸಿನಿಮಾ ಮಾಡೋದು. ಇದು ನನಗೆ ಎಕ್ಸೈಟ್ ಅನಿಸಿತು. ಇಲ್ಲಿವರೆಗೂ ಮಾಡಿದ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವ ಅನುಭವ ನನಗೆ ಇದೆ. ನಾನು ಸಿನಿಮಾ ನೋಡಿಲ್ಲ. ಸಿನಿಮಾ ನೋಡಲು ನಾನು ಎಕ್ಸೈಟ್ ಆಗಿದ್ದಾನೆ. ಅನೀಶ್ ಅವರಿಗೆ ಈ ಕಥೆ ವಿಭಿನ್ನವಾಗಿದೆ ಅನಿಸುತ್ತದೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇದೆ ಎಂದು ಭಾವಿಸುತ್ತೇನೆ” ಎಂದರು.

ಈ ಬಗ್ಗೆ ನಟ ಅನೀಶ್ ಮಾತನಾಡಿ, “ಪ್ರತಿಯೊಂದು ಅಂತ್ಯದಲ್ಲೊಂದು ಆರಂಭ ಇರುತ್ತದೆ ಎಂಬ ಹಾಗೇ ‘ಬೆಂಕಿ’ ಕಲೆಕ್ಷನ್ ಎಲ್ಲ ನೋಡಿ ಎಂಡ್ ಪಾಯಿಂಟ್​ನಲ್ಲಿ ಇದ್ದೇನಾ ಅನಿಸಿತು. ನನ್ನಿಂದ ಪ್ರೇಕ್ಷಕರು ಬೇರೆಯದ್ದನ್ನೂ ನಿರೀಕ್ಷೆ ಮಾಡುತ್ತಿದ್ದಾರೆ ಎಂಬುವುದು ಗೊತ್ತಾಯಿತು. ನನಗೆ ಅಂತ ಮಾಡಿಕೊಂಡ ಸಬ್ಜೆಕ್ಟ್ ಅನ್ನು ನಿನಗಂತ ಹೇಳುತ್ತೇನೆ. ‘ಆರಾಮ್ ಅರವಿಂದ್ ಸ್ವಾಮಿ’ ಎಂದು ಅನೌನ್ಸ್ ಮಾಡಿದ್ದೇನೆ ಎಂದು ಅಭಿಷೇಕ್ ಶೆಟ್ಟಿ ಹೇಳಿದರು. ನಿನಗೆ ಅಂತ ಮಾಡಿಕೊಂಡಿದ್ದನ್ನೂ ನನಗೆ ಯಾಕೆ ಹೇಳುತ್ತೀಯಾ? ಅಂದಾಗ, ಇಲ್ಲ ನಿಮಗೆ ಮಾಡುತ್ತೇನೆ ಎಂದು ಕಥೆ ಹೇಳಿದರು. ಕಥೆ ಇಷ್ಟವಾಯ್ತು. 15 ನಿಮಿಷದಲ್ಲಿ ಸಿನಿಮಾ ಮಾಡೋಣ ಎಂದು ರೆಡಿಯಾದೆವು. ಸಿನಿಮಾ ಹುಚ್ಚಿರುವ ಎಲ್ಲರೂ ಸೇರಿ ಮಾಡಿರುವ ಸಿನಿಮಾವೇ ‘ಆರಾಮ್ ಅರವಿಂದ್ ಸ್ವಾಮಿ” ಎಂದು ತಿಳಿಸಿದರು

ನಿರ್ದೇಶಕ ಅಭಿಷೇಕ್ ಶೆಟ್ಟಿ ಮಾತನಾಡಿ, “ಗುಳ್ಟು ಪ್ರೊಡ್ಯೂಸರ್ ಹಾಗೂ ಅಕೀರಾ ಸಿನಿಮಾ ಪ್ರೊಡ್ಯೂಸರ್ ಒಂದೊಳ್ಳೆ ಕಥೆ ಇದ್ದರೆ ಹೇಳಿ ಎಂದರು. ಕಥೆ ಹೇಳಿದೆ. ಅನೀಶ್ ಅವರಿಗೆ ಕಥೆ ಹುಡುಕುತ್ತಿರುವುದು ಎಂದು ಗೊತ್ತಾಯಿತು. ನಾನು ಒಂದು ಮಾಸ್ ಕಥೆ ಮಾಡಿಕೊಂಡು ಬಂದು ಹೇಳಿದೆ. ಒಪ್ಪಿಕೊಳ್ತಾರೆ ಎಂದುಕೊಂಡಿದ್ದರು. ಅವರು ಔಟ್ ಆಫ್ ದಿ ಬಾಕ್ಸ್ ಕಥೆ ಮಾಡಲು ರೆಡಿ ಇದ್ದರು. ಆಗ ಹೇಳಿದ್ದೇ ಆರಾಮ್ ಅರವಿಂದ್ ಸ್ವಾಮಿ ಕಥೆ. ಎಲ್ಲರೂ ಬಂದು ಆರಾಮಾಗಿ ಇದ್ದೀಯಾ ಅಂತ ಕೇಳ್ತಾರೆ. ಯಾರಿಗೂ ನಮ್ಮ ಕಷ್ಟ ಹೇಳೋದಿಕ್ಕೆ ಆಗಲ್ಲ. ಹೇಳಿದ್ರೆ ಸಹಾಯ ಮಾಡ್ತೀಯಾ ಅನ್ನುತ್ತೇವೆ. ಅವರು ನಕ್ಕು ಸುಮ್ಮನೇ ಆಗುತ್ತಾರೆ. ಈ ಬೇಸ್ ಲೈನ್ ಮೇಲೆ ಶುರುವಾದ ಕಥೆ ಇದು. ಅದ್ಭುತವಾಗಿ ಸಿನಿಮಾ ಬಂದಿದೆ. ಎರಡು ಸಿನಿಮಾ ಆದಾಗ ಎಲ್ಲರೂ ಒಳ್ಳೆ ಭವಿಷ್ಯವಿದೆ ಎನ್ನುವರು. ಆದರೆ ಆರಾಮ್ ಅರವಿಂದ್ ಸ್ವಾಮಿಯೇ ನನ್ನ ಭವಿಷ್ಯ. ಈ ಸಿನಿಮಾದಿಂದ ನನ್ನ ಭವಿಷ್ಯ ಶುರುವಾಗ್ತಿದೆ. ಸಿನಿಮಾಗೆ ಏನೂ ಬೇಕು ಎಲ್ಲವನ್ನೂ ನಿರ್ಮಾಪಕರು ಕೊಟ್ಟಿದ್ದಾರೆ. ಪಾತ್ರ ವರ್ಗ ಅಭಿನಯವೂ ಚೆನ್ನಾಗಿದೆ” ಎಂದು ಹೇಳಿದರು.

ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರ್ತಿದೆ. ‘ಅಕಿರ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಸಾಗರ್ ಛಾಯಾಗ್ರಹಣ, ಉಮೇಶ್ ಸಂಕಲನವಿದೆ. ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ಅವರಿಗೆ ಆರಾಮ್ ಅರವಿಂದ್ ಸ್ವಾಮಿ ಮೂರನೇ ಸಿನಿಮಾ. ಈ ಚಿತ್ರದ ಮೂಲಕ ಅನೀಶ್ ತೇಜೇಶ್ವರ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರು, ಕೇರಳ, ಕನಕಪುರ, ಮೈಸೂರು ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ.

“ಆರಾಮ್ ಅರವಿಂದ್ ಸ್ವಾಮಿ ನನ್ನ ಎರಡನೇ ಸಿನಿಮಾ. ನನ್ನ ಪಾತ್ರ ಬಹಳ ವಿಭಿನ್ನವಾಗಿದೆ. ನನ್ನ ಪಾತ್ರ ಕೇಳಿದಾಗಲೇ ಥ್ರಿಲ್ ಆಗಿದ್ದೆ. ಪ್ರಾಕ್ಟೀಸ್ ಮಾಡಿ, ಹಾರ್ಡ್​ವರ್ಕ್ ಪಾತ್ರ ಮಾಡಿದ್ದೇನೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ. ಆರಾಮ್ ಅರವಿಂದ್ ಸ್ವಾಮಿ ಒಂದೊಳ್ಳೆ ಸಿನಿಮಾ. ನಿಮ್ಮ ಬೆಂಬಲ ಚಿತ್ರದ ಮೇಲೆ ಇರಲಿ” ಎಂದು ನಟಿ ಹೃತಿಕಾ ಶ್ರೀನಿವಾಸ್ ನುಡಿದರು. ಮುಂದಿನ ತಿಂಗಳು ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರು ಮಾಡಲಿರುವ ಚಿತ್ರತಂಡ ಜನವರಿ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲಿದೆ.