ಆಕಾಶ್ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ನಾಸಾ ಪ್ರವಾಸದ ಅವಕಾಶ

ಉಡುಪಿ: ರಾಷ್ಟ್ರವ್ಯಾಪಿ 2000 ಹಿಂದುಳಿದ ಹೆಣ್ಣು ಮಕ್ಕಳಿಗೆ ಉಚಿತ ಎನ್.ಇ.ಇ.ಟಿ ಮತ್ತು ಜೆಇಇ ಕೋಚಿಂಗ್ ಮತ್ತು ವಿದ್ಯಾರ್ಥಿವೇತನವನ್ನು ನೀಡಲು ಆಕಾಶ್ ಸಂಸ್ಥೆಯು ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನ ಪರೀಕ್ಷೆಯನ್ನು ನವೆಂಬರ್ 5 ರಿಂದ 13 ರ ನಡುವೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ನಡೆಸಲಿದೆ ಎಂದು ಸಂಸ್ಥೆಯ ಸಹಾಯಕ ನಿರ್ದೇಶಕ ಶ್ಯಾಮ್ ಪ್ರಸಾದ್ ಹೇಳಿದರು.

ಅವರು ಗುರುವಾರ ಕುಂಜಿಬೆಟ್ಟುವಿನಲ್ಲಿರುವ ಆಕಾಶ್ ಸಂಸ್ಥೆಯ ಕಟ್ಟಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಆಕಾಶ್ ಆ್ಯಂತೆಯ 13 ನೇ ಆವೃತ್ತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಆಕಾಶ್ ಸಂಸ್ಥೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ನಿಟ್ಟಿನಲ್ಲಿ ಕಳೆದ ಹತ್ತು ವರ್ಷಗಳಿಂದ ಆಕಾಶ್-ಆ್ಯಂತೆ ಅಖಿಲ ಭಾರತ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಆಕರ್ಷಕ ಉಡುಗೊರೆಗಳು ಮತ್ತು ಉಚಿತ ವಿದ್ಯಾಭ್ಯಾಸದ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.

ವಿದ್ಯಾರ್ಥಿಗಳಿಗೆ, ವಿಷೇಶವಾಗಿ ಹೆಣ್ಣುಮಕ್ಕಳಿಗೆ, ಆರ್ಥಿಕವಾಗಿ ದುರ್ಬಲರಾಗಿರುವವರಿಗೆ, ಒಂದು ಹೆಣ್ಣು ಮಗು ಇರುವ ಅಥವಾ ಒಂಟಿ ಪೋಷಕ(ತಾಯಿ)ರಿರುವ ಕುಟುಂಬಗಳಿಗೆ ಅನುಕೂಲವಾಗಲು ಈ ಅಭಿಯಾನವನ್ನು ಆಯೋಜಿಸಲಾಗಿದೆ.

ಈ ಬಾರಿ ದೇಶಾದ್ಯಂತ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ ಇದ್ದು, ಉಡುಪಿ ಜಿಲ್ಲೆಯಿಂದ ಕನಿಷ್ಠ 8 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅಂದಾಜಿದೆ. ಹಿಂದಿನ ಸಾಲಿನಿಂದ ಪ್ರತಿಭಾವಂತ 5 ವಿದ್ಯಾರ್ಥಿಗಳನ್ನು ಯಾದೃಚ್ಛಿಕವಾಗಿ ಆಯ್ಕೆಮಾಡಿ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಉಚಿತವಾಗಿ ಕಳುಹಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳ ಪ್ರವಾಸದ ಎಲ್ಲಾ ಖರ್ಚುಗಳನ್ನು ಸಂಸ್ಥೆಯೆ ಭರಿಸುತ್ತದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಆ್ಯಂತೆ ಪರೀಕ್ಷೆಯ ನಿಯಮಗಳು
# ಪರೀಕ್ಷೆ ಒಂದು ಗಂಟೆಯದ್ದಾಗಿರುತ್ತದೆ.
# ನವೆಂಬರ್ 5-13 ರವರೆಗೆ ನಡೆಯಲಿದೆ.
# ಆನ್ ಲೈನ್ ಪರೀಕ್ಷೆಗಳು ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಆಫ್ ಲೈನ್ ಪರೀಕ್ಷೆ ನವೆಂಬರ್ 6 ಮತ್ತು 13 ರಂದು ಬೆಳಗ್ಗೆ 10.30 – 11.30 ಹಾಗೂ ಸಂಜೆ 4-5 ಗಂಟೆಗೆ ಸಂಸ್ಥೆಯ ಎಲ್ಲಾ 285 ಶಾಖೆಗಳಲ್ಲಿ ನಡೆಯಲಿದೆ.
# ವಿದ್ಯಾರ್ಥಿಗಳು ತಮಗೆ ಅನುಕೂಲವೆನಿಸಿದ ಸಮಯಗಳನ್ನು ಆಯ್ದುಕೊಳ್ಳಬಹುದು.
# ಒಟ್ಟು 90 ಅಂಕದ ಪ್ರಶ್ನೆಗಳಿದ್ದು, ವಿದ್ಯಾರ್ಥಿಗಳು ಅಪೇಕ್ಷಿಸುವ ಶ್ರೇಣಿಗಳು ಮತ್ತು ಸ್ಟ್ರೀಮ್‌ಗಳನ್ನು ಆಧರಿಸಿದ 35 ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ.

ಕಳೆದ ಬಾರಿಯ ಆ್ಯಂತೆ ಪರೀಕ್ಷೆಗೆ 2 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ ಉನ್ನತ ಶ್ರೇಣಿ ಪಡೆದ 5 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಎಲ್ಲಾ ವಿದ್ಯಾರ್ಥಿಗಳು ಸಂಸ್ಥೆಯ ಜೊತೆ ಒಡನಾಡಿದ ತಮ್ಮ ಅನುಭವವವನ್ನು ಹಂಚಿಕೊಂಡರು.

ಆ್ಯಂತೆ ಪರೀಕ್ಷೆಯಲ್ಲಿ 41 ನೇ ಶ್ರೇಣಿ ಪಡೆದ ವೃಜೇಶ್ ಶೆಟ್ಟಿ ಮತ್ತು 20 ನೇ ಶ್ರೇಣಿ ಪಡೆದ ವೃಶಾನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯಲ್ಲಿ ನೀಟ್, ಜೆ.ಇ.ಇ ಮತ್ತು ಐ.ಐ.ಟಿ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸಿ ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಪರೀಕ್ಷೆಗಳನ್ನು ಎದುರಿಸಲು ನುರಿತ ಶಿಕ್ಷಕ ವೃಂದದವರಿಂದ ತರಬೇತಿ ನೀಡಲಾಗುತ್ತದೆ.

ಸಂಸ್ಥೆಯ ಉಡುಪಿ ಶಾಖೆಯ ವ್ಯವಸ್ಥಾಪಕ ವಿಮರ್ಶ್ ಶೆಟ್ಟಿ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.

ಆಕಾಶ್ ಸಂಸ್ಥೆಯಲ್ಲಿ ಏಳನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ಮಕ್ಕಳಿಗೆ ಕೋಚಿಂಗ್ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ : anthe.aakash.ac.in ಗೆ ಲಾಗ್ ಇನ್ ಮಾಡಲು ತಿಳಿಸಲಾಗಿದೆ.