ನಗರದ ಸೋದೆ ಮಠದ ಜಗಲಿಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ವ್ಯಕ್ತಿಯ ರಕ್ಷಣೆ ಜಿಲ್ಲಾ ಆಸ್ಪತ್ರೆಗೆ ದಾಖಲು

ಉಡುಪಿ: ನಗರದ ಸೋದೆ ಮಠದ ಜಗಲಿಯಲ್ಲಿ ಹೊಟ್ಟೆ ಹಾಗೂ ಕಾಲು ಉಬ್ಬಿಕೊಂಡು ಅನಾರೋಗ್ಯದಿಂದ ತೀರಾ ಅಸ್ವಸ್ಥಗೊಂಡು ಬಿದ್ದಿದ್ದ ವ್ಯಕ್ತಿಯನ್ನು ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಅವರು ಸಾರ್ವಜನಿಕರ ಸಹಕಾರದೊಂದಿಗೆ ರಕ್ಷಣೆ ಮಾಡಿ ಜಿಲ್ಲಾ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಈ ಹಿಂದೆ ಕೂಡ ಇದೇ ವ್ಯಕ್ತಿಗೆ ಕಣ್ಣುಗಳೆರಡು ಮಂಜಾಗಿ ಸರಿಯಾಗಿ ನಡೆದಾಡಲು ಆಗದಿರುವಂಥ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಅವರು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಿ ಮಾನವೀಯತೆಯನ್ನು ಮರೆದಿದ್ದರು. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಗಣೇಶ 38 ವರ್ಷ ಪ್ರಾಯ ಸುಬ್ರಹ್ಮಣ್ಯದ ಪಂಜಾ ನಿವಾಸಿ ಎಂದು ಗುರುತಿಸಲಾಗಿದೆ. ವ್ಯಕ್ತಿಯು ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು ಸಂಬಂಧಿಕರು ಕೂಡಲೇ ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ.