ಹುಲಿ ಉಗುರು ಸಹಿತ ಅರಣ್ಯ ಜೀವಿ ವಸ್ತುಗಳನ್ನು ಹಿಂದಿರುಗಿಸಲು ಕೊನೆಯ ಅವಕಾಶ ನೀಡಲು ಚಿಂತನೆ

ಬೆಂಗಳೂರು: ಹುಲಿ ಉಗುರು ಸಹಿತ ಅರಣ್ಯ ಜೀವಿ ವಸ್ತುಗಳನ್ನು ಹಿಂದಿರುಗಿಸಲು ಕೊನೆಯ ಅವಕಾಶ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಹುಲಿ ಉಗುರು ಸೇರಿದಂತೆ ಅರಣ್ಯ ಜೀವಿ ವಸ್ತುಗಳನ್ನು ಒಪ್ಪಿಸಿ ಮುಂಬರುವ ಆಪತ್ತು ತಪ್ಪಿಸಲು ಅವಕಾಶ ನೀಡಲು ಸರ್ಕಾರ ಮುಂದಾಗಿದೆ. ಅರಣ್ಯ ಇಲಾಖೆಗೆ ಒಪ್ಪಿಸುವ ಹಾಗೂ ಕಾನೂನಾತ್ಮಕ ವಿಷಯಗಳ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಸಮಾಲೋಚನೆ ನಡೆಸಿದ್ದಾರೆ. ಜನರು ತಮ್ಮಲ್ಲಿರುವ ವನ್ಯಜೀವಿ ವಸ್ತುಗಳನ್ನು ಕರ್ನಾಟಕ ಅರಣ್ಯ ಇಲಾಖೆಗೆ ಒಪ್ಪಿಸುವಂತೆ ನಿಯಮ ಜಾರಿಗೆ ತರಲು ಚಿಂತಿಸಲಾಗುತ್ತಿದೆ.

ಎಜಿ ಶಶಿಕಿರಣ್ ಶೆಟ್ಟಿ ನೇತೃತ್ವದ ಅಧಿಕಾರಿಗಳ ಜೊತೆ ಚರ್ಚಿಸಿರುವ ಸಚಿವ ಈಶ್ವರ ಖಂಡ್ರೆ, ವನ್ಯಜೀವಿಗಳ ಅಂಗಾಂಗದ ವಸ್ತು ಮರಳಿಸುವ ಕುರಿತು ಸಮಾಲೋಚನೆ ನಡೆಸಿದ್ದಾರೆ. ವನ್ಯಜೀವಿಗಳ ಮುಖ ಫಲಕ ಮರಳಿಸುವ ಬಗ್ಗೆಯೂ ಚರ್ಚಿಸಿದ್ದಾರೆ. ಕೊನೆಯ ಅವಕಾಶ ನೀಡುವ ಕುರಿತು ರೂಪರೇಷೆ ಸಿದ್ಧಪಡಿಸಲು ಸೂಚಿಸಿದ್ದಾರೆ.

ಒಮ್ಮೆ ಅನುಮೋದನೆ ಪಡೆದ ಬಳಿಕ ಆದೇಶಗಳನ್ನು ನೀಡಲಾಗುತ್ತದೆ. ಸಾವಜನಿಕರು ವನ್ಯಜೀವಿ ವಸ್ತುಗಳನ್ನು ಎಷ್ಟು ದಿನಗಳಲ್ಲಿ ಒಪ್ಪಿಸಬಹುದು ಎಂಬುದನ್ನು ಅರಣ್ಯ ಇಲಾಖೆಯು ಪ್ರಕಟಿಸುತ್ತದೆ. 2003ರಲ್ಲಿ 180 ದಿನಗಳ ಕಾಲ ಈ ಅವಕಾಶ ನೀಡಲಾಗಿತ್ತು. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 64 ರ ಅಡಿಯಲ್ಲಿ ರಾಜ್ಯವು ನಿಯಮಗಳನ್ನು ರೂಪಿಸಲು ಅವಕಾಶ ನೀಡುತ್ತದೆ.

ವಸ್ತುಗಳನ್ನು ಒಪ್ಪಿಸಿದಾಗ ವ್ಯಕ್ತಿಯ ವಿವರಗಳನ್ನು ಗಮನಿಸಲಾಗುವುದು, ಆದರೆ ಬಹಿರಂಗಪಡಿಸುವುದಿಲ್ಲ ಎಂದು ಹಿರಿಯ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವ್ಯಕ್ತಿಗಳು ವಸ್ತುಗಳನ್ನು ಇಟ್ಟುಕೊಳ್ಳಲು ಅನುಮತಿಸಲಾಗುವುದಿಲ್ಲ. ಈಗಾಗಲೇ ಮಾಲೀಕತ್ವದ ಪ್ರಮಾಣಪತ್ರಗಳನ್ನು ಹೊಂದಿರುವವರು ಶರಣಾಗುವ ಅಗತ್ಯವಿಲ್ಲ, ಆದರೆ ಪ್ರಮಾಣಪತ್ರವನ್ನು ನವೀಕರಿಸಬೇಕಾಗುತ್ತದೆ. ವನ್ಯಜೀವಿ ವಸ್ತುಗಳ ಬ್ಯಾಕೆಂಡ್ ವಿಚಾರಣೆ ಮಾಡಲಾಗುತ್ತದೆ. ಯಾವುದೇ ವಸ್ತುವು ಕ್ರಿಮಿನಲ್ ಪ್ರಕರಣದ ಭಾಗವಾಗಿದೆ ಎಂದು ಕಂಡುಬಂದರೆ, ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹಿಸುವುದು ತಪ್ಪಾಗುತ್ತದೆ. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ ಮೂರು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಮತ್ತು ಕನಿಷ್ಠ 10,000 ರೂ. ದಂಡ ವಿಧಿಸುವ ಸಾಧ್ಯತೆ ಇದೆ.