ತೋಟಗಾರಿಕಾ ಆಸಕ್ತರ ಗಮನ ಸೆಳೆಯುತ್ತಿದೆ ರಂಗುಬಿರಂಗಿ ಹೂಗಿಡಗಳ ಸಸ್ಯಸಂತೆ

ಉಡುಪಿ: ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ನ.5 ರಿಂದ 7 ರ ವರೆಗೆ ನಡೆಯುವ ಸಸ್ಯಸಂತೆ ಕಾರ್ಯಕ್ರಮದಲ್ಲಿ 40 ಕ್ಕೂ ಅಧಿಕ ಜಾತಿಯ ಅಲಂಕಾರಿಕಾ ಸಸ್ಯಗಳು, 15 ಕ್ಕೂ ಅಧಿಕ ಜಾತಿಯ ಹಣ್ಣಿನ ಸಸ್ಯಗಳು, ತೆಂಗು, ಕಾಳು ಮೆಣಸಿನ ಸಸಿಗಳು, 50 ಕ್ಕೂ ಹೆಚ್ಚು ತರಕಾರಿ ಮತ್ತು ಹಣ್ಣಿನ ಬೀಜಗಳ ಮಾರಾಟ ಕೃಷಿ ಮತ್ತು ತೋಟಗಾರಿಕಾ ಆಸಕ್ತರನ್ನು ಗಮನ ಸೆಳೆಯುತ್ತಿದೆ.

ತೋಟಗಾರಿಕಾ ಇಲಾಖೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಖಾಸಗಿ ಮತ್ತು ಸರ್ಕಾರಿ ನರ್ಸರಿಗಳಲ್ಲಿ ಬೆಳೆಸಿರುವ ಸಸ್ಯಗಳು, ಕಸಿ ಗಿಡಗಳು ಮತ್ತು ನರ್ಸರಿ ಉಪಕರಣಗಳ ಮಾರಾಟ ನಡೆಯುತ್ತಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ನಗರ ಪ್ರದೇಶದಲ್ಲಿ ಮನೆಯ ಆವರಣದಲ್ಲಿ ಜಾಗದ ಕೊರತೆ ಇದ್ದರೂ ಸಹ ಮನೆಗಳ ಮೇಲ್ಛಾವಣಿಯಲ್ಲಿ ಹೂ ಮತ್ತು ಹಣ್ಣಿನ ಸಸ್ಯಗಳನ್ನು ಬೆಳೆಸಲು ಸಾಧ್ಯವಿದ್ದು, ಈ ಸಸ್ಯಸಂತೆಯ ಮೂಲಕ ಉತ್ತಮ ಸಸಿಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.

ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ, ಗಿರೀಶ್ ಅಂಚನ್, ಪ್ರಭಾಕರ ಪೂಜಾರಿ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ, ಸಹಾಯಕ ನಿರ್ದೇಶಕ ಗುರುಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಶ್ರೀನಿವಾಸ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.