ಕುಂದಾಪುರ: ಯುವಕ ಸಮುದ್ರಪಾಲು

ಕುಂದಾಪುರ : ಯುವಕನೊಬ್ಬ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಸಮುದ್ರಪಾಲಾದ ಘಟನೆ ಕೋಟೇಶ್ವರ ಸಮೀಪದ ಬೀಜಾಡಿ ಬೀಚ್‌ನಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಆತನ ಜತೆಗೆ ಬಂದು, ರಕ್ಷಣೆಗೆಂದು ಕಡಲಿಗಿಳಿದ ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಘಟನೆ ಹಿನ್ನೆಲೆ: ಸಮುದ್ರಕ್ಕೆ ತೆರಳಿದ ಇಬ್ಬರು ತಿಪಟೂರು ಮೂಲದವರಾಗಿದ್ದು ಗುರುವಾರ ‌ನಡೆಯಲಿದ್ದ ವಿವಾಹ ಕಾರ್ಯಕ್ರಮಕ್ಕೆ ಸ್ಮೇಹಿತನ ಆಮಂತ್ರಣದ ಮೇಲೆ ಬೀಜಾಡಿಗೆ ಆಗಮಿಸಿದ್ದರು. ಸಂಜೆ ವೇಳೆ ಸಮುದ್ರದ ಬಳಿ ತೆರಳಿದ್ದು ನೀರಿಗಿಳಿದ ಯೋಗೀಶ್ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ. ಆತನ ಸ್ನೇಹಿತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇತ್ತೀಚಿನ ಒಂದೆರಡು ದಿನದಿಂದ ಗಾಳಿ-ಮಳೆ ಇರುವ ಕಾರಣ ಕಡಲು ಪ್ರಕ್ಷುಬ್ಧಗೊಂಡಿದ್ದು ಅಲೆಗಳು ಹೆಚ್ಚಿದೆ. ಸಂಜೆಯವರೆಗೂ ಕಾಣೆಯಾದ ಯುವಕನ ಹುಡುಕಾಟಕ್ಕೆ ಪೊಲೀಸರು, ಮೀನುಗಾರರು, ಸ್ಥಳೀಯರು ಹರಸಾಹಸಪಟ್ಟರು.
ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕ ಯು.ಬಿ ನಂದಕುಮಾರ್, ಪಿಎಸ್ಐ ಪ್ರಸಾದ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.