ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕ & ಹೋಂ ನರ್ಸ್ ಇಸ್ರೇಲ್‌ನಲ್ಲಿ

ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸುಮೇಶ ಅವರು ಜೇರುಸೆಲಂನಲ್ಲಿ ಸಿಲುಕಿದ್ದಾರೆ. ಇಸ್ರೆಲ್‌ನ ಜೇರುಸೆಲಂನಲ್ಲಿ ಲಾಡ್ಜ್​ನಲ್ಲಿರುವ ಸುಮೇಶ ಹವಾಮಾನ ಶಾಸ್ತ್ರದ ಕುರಿತ ತರಬೇತಿಗಾಗಿ ತೆರಳಿದ್ದರು.ಇಸ್ರೆಲ್ ಮತ್ತು ಹಮಾಸ್ ಯುದ್ಧ ನಡೆಯುತ್ತಿದ್ದು, ಪ್ರಸ್ತುತ ಧಾರವಾಡ ಓರ್ವ ವ್ಯಕ್ತಿ ಇಸ್ರೆಲ್​ನಲ್ಲಿ ಸಿಲುಕಿಕೊಂಡಿದ್ದಾರೆ. ಧಾರವಾಡದ ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕ ಹಾಗೂ ಕೋಲಾರ ಮೂಲದ ಹೋಂ ನರ್ಸ್ ಇಸ್ರೇಲ್‌ನಲ್ಲಿ ಸಿಲುಕಿದ್ದಾರೆ.

ಇಸ್ರೇಲ್​ನಲ್ಲಿ ಸಿಲುಕಿದ ಕೋಲಾರ ಮೂಲದ ಮಹಿಳೆ: ಇಸ್ರೇಲ್​ನಲ್ಲಿ ಕೋಲಾರ ಜಿಲ್ಲೆ ಮಾಲೂರು ಮೂಲದ ಮಹಿಳೆ ಶಾಂತಿ ಆಲ್ಮೇಡಾ ಸಿಲುಕಿಕೊಂಡಿದ್ದಾರೆ. ಇಸ್ರೇಲ್​ನ ರಾಬ್ಸ್​ನಲ್ಲಿ ನೆಲೆಸಿರುವ ಅವರು, ಅಲ್ಲಿನ ಬಂಕರ್​ನಲ್ಲಿ ಆಶ್ರಯ ಪಡೆದಿದ್ದಾರೆ. ಶಾಂತಿ ಆಲ್ಮೇಡಾ ಇಸ್ರೇಲ್​ನಲ್ಲಿ 10 ವರ್ಷಗಳಿಂದ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಜೇರುಸೆಲಂ ನಗರದ ಹೆಬ್ರು ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯವುದಕ್ಕಾಗಿ ಹೋಗಿದ್ದರು. ತರಬೇತಿಯು ಆಗಸ್ಟ್ 7ರಿಂದ ಆರಂಭಗೊಂಡಿತ್ತು. ಅಕ್ಟೋಬರ್ 22ರ ವರೆಗೆ ತರಬೇತಿ ಆಯೋಜಿಸಲಾಗಿದೆ. ಸುಮೇಶ ಲಾಡ್ಜ್​ನಲ್ಲಿಯೇ ಉಳಿದುಕೊಂಡಿದ್ದಾರೆ. ಅಲ್ಲಿ ನಡೆಯಬೇಕಾಗಿದ್ದ ತರಬೇತಿ ಕೂಡ ರದ್ದಾಗಿದೆ. ಒಂದು ವಾರಕ್ಕೆ ಆಗುವಷ್ಟು ಆಹಾರವನ್ನು ಸುಮೇಶ ಸಂಗ್ರಹಿಸಿಟ್ಟುಕೊಂಡಿದ್ದಾರೆ‌. ಅಕ್ಟೋಬರ್ 22 ರವರೆಗೆ ತರಬೇತಿ ಮುಗಿಸಿ ಅ.27ಕ್ಕೆ ಭಾರತಕ್ಕೆ ಬರಬೇಕಿತ್ತು. ಈಗಾಗಲೇ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಸಹ ಸುಮೇಶ ಸಂಪರ್ಕದಲ್ಲಿದ್ದಾರೆ.

ಇಸ್ರೇಲ್ ಸರ್ಕಾರದಿಂದ ತುರ್ತು ಸೈರನ್ ಮೊಳಗಿದ ಹಿನ್ನೆಲೆ, ಅವರು ಬಂಕರ್​ನಲ್ಲಿ ಆಶ್ರಯ ಪಡೆದಿದ್ದಾರೆ. ಶಾಂತಿ ಆಲ್ಮೇಡಾ ಇರುವ ಪ್ರದೇಶದಲ್ಲಿ ಯಾವುದೇ ಅಪಾಯವಿಲ್ಲ. ಕೇವಲ ಬಾಂಬ್ ಹಾಗೂ ರಾಕೇಟ್ ಸದ್ದು ಮಾತ್ರ ಕೇಳಿಸುತ್ತಿದೆ. ನಾನು ಸುರಕ್ಷಿತವಾಗಿ ಇದ್ದೇನೆ. ಆಹಾರ ಹಾಗೂ ನೀರಿಗೆ ಯಾವುದೇ ತೊಂದರೆ ಇಲ್ಲ. ಭಾರತೀಯ ರಾಯಭಾರ ಕಚೇರಿಯ ಸಂಪರ್ಕದಲ್ಲಿ ಇದ್ದೇನೆ ಎಂದು ಶಾಂತಿ ಆಲ್ಮೇಡಾ ತಿಳಿಸಿದ್ದಾರೆ ಎಂದು ಪತಿ ಗ್ರೇಶನ್ ಆಲ್ಮೇಡಾ ಮಾಹಿತಿ ನೀಡಿದರು.

ಉದ್ಯೋಗದ ನಿಮಿತ್ತ ಇಸ್ರೇಲ್​ನಲ್ಲಿ ನೆಲೆಸಿರುವ ಭಟ್ಕಳದ 40ಕ್ಕೂ ಅಧಿಕ ಜನರು ಪ್ರಸ್ತುತ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಇವರೆಲ್ಲರೂ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಇದರಿಂದ ಮನೆ ಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಯುದ್ದದ ಪರಿಸ್ಥಿತಿ ಮುಂದೇನಾಗಲಿದೆ ಎನ್ನುವ ಆತಂಕ ಕುಟುಂಬಸ್ಥರಿಗೆ ಕಾಡುತ್ತಿದೆ. ಮುಂಡಳ್ಳಿ ಭಾಗದ 12 ಮಂದಿ ಮತ್ತು ಮುರುಡೇಶ್ವರ ಬಸ್ತಿ ಚರ್ಚ್​ ಕ್ರಾಸ್​ ಬಳಿ 29 ಜನರು ಇಸ್ರೇಲ್‌ನಲ್ಲಿ ನೆಲೆಸಿರುವುದು ಖಚಿತವಾಗಿದೆ. ಮುರುಡೇಶ್ವರದ ಚರ್ಚ್​ ಕ್ರಾಸ್ ಸಮೀಪದ ನಿವಾಸಿ ಇಸ್ರೇಲ್‌ನಲ್ಲಿ ನೆಲೆಸಿರುವ ಸುನೀಲ್​ ಎಫ್​. ಗೋಮ್ಸ್ ಮತ್ತು ಡಾಲ್ಪಿ ಗೋಮ್ಸ್ ನಿವಾಸಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅವರ ತಾಯಿ ಹೇಲಿನ್ ಗೋಮ್ಸ್ ಮತ್ತು ಸಹೋದರಿಯರ ಜೊತೆಗೆ ವಿಡಿಯೋ ಕಾಲ್ ಮಾಡಿ, ತಮ್ಮ ಸುರಕ್ಷತೆಯ ಕುರಿತು ವಿಚಾರಿಸಿದ್ದಾರೆ.

ಇಸ್ರೇಲ್​ನಲ್ಲಿ ನೆಲೆಸಿರುವ ಕುಟುಂಬ ಸದಸ್ಯರು ಸಂಪರ್ಕಕ್ಕೆ: ಮತ್ತೊಂದೆಡೆ, ಹಮಾಸ್ ಉಗ್ರರು ಇಸ್ರೇಲ್ ಮೇಲೆ ಕ್ಷಿಪಣಿಗಳ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಹಲವು ಜನರು ಮೃತಪಟ್ಟಿದ್ದಾರೆ. ಈಗಾಗಲೇ ಭಾರತೀಯರ ರಕ್ಷಣೆಗೆ ಭಾರತೀಯ ರಾಯಭಾರಿ ಕಚೇರಿ ಮುಂದಾಗಿದೆ. ಇಸ್ರೇಲ್​ನಲ್ಲಿ ನೆಲೆಸಿರುವ ಭಟ್ಕಳದ 40ಕ್ಕೂ ಹೆಚ್ಚು ಜನರು ರಕ್ಷಣೆ ಪಡೆದಿದ್ದು, ಅವರ ಹೆಸರುಗಳನ್ನು ಗುರುತಿಸಲಾಗಿದೆ. ಎಲ್ಲರೂ ತಮ್ಮ ಕುಟುಂಬಸ್ಥರ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ.