ದಾವಣಗೆರೆ : ಸಿದ್ದಗಂಗಾ ಶಾಲೆಯ ನಿರ್ದೇಶಕ ಡಾ ಜಯಂತ್ ಅವರು ಪರಿಸರ ಸ್ನೇಹಿ ಗಣಪತಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದಾರೆ. ದಾವಣಗೆರೆ ನಗರದ ಸಿದ್ದಗಂಗಾ ಶಾಲೆಯ ಮಕ್ಕಳು ನ್ಯೂಸ್ ಪೇಪರ್ನಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಪಿಒಪಿ ಗಣೇಶನ ಮೂರ್ತಿಯ ಹಾವಳಿಯಲ್ಲಿ ಪರಿಸರ ಸ್ನೇಹಿ ಗಣೇಶಗಳ ನಿರ್ಮಾಣ ಕಡಿಮೆಯಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸ್ನೇಹಿ ಗಣೇಶಗಳಿಗೆ ಒತ್ತು ನೀಡಿ ಎಂದು ಕರೆ ನೀಡಿದ ಬೆನ್ನಲ್ಲೇ ನಗರದ ಸಿದ್ದಗಂಗಾ ಶಾಲೆಯ ಮಕ್ಕಳು ಅನುಪಯುಕ್ತ ನ್ಯೂಸ್ ಪೇಪರ್ನಲ್ಲಿ ಗಣೇಶನ ಮೂರ್ತಿ ನಿರ್ಮಾಣ ಮಾಡಿ ಪ್ರತಿಷ್ಠಾಪಿಸಿದ್ದಾರೆ. ಆ ಗಣೇಶನ ಮೂರ್ತಿ ಜನರನ್ನು ಆಕರ್ಷಿಸುತ್ತಿದೆ.
ಈ ಶಾಲೆಯಲ್ಲಿ ಏಳನೇ ವರ್ಷದ ಗಣೇಶೋತ್ಸವ ಆಚರಿಸಿದ್ದು, ಒಟ್ಟು 12 ಅಡಿಯ ಗಣೇಶನ ಮೂರ್ತಿಯನ್ನು ಸಂಪೂರ್ಣವಾಗಿ ಪೇಪರ್ನಿಂದ ನಿರ್ಮಾಣ ಮಾಡಲಾಗಿದೆ. ನಿರ್ಮಿಸಲು 10 ದಿನ ಹಿಡಿದಿದ್ದು, 40 ಕೆಜಿ ಪೇಪರ್ ಬಳಕೆ ಮಾಡಿ ಗಣೇಶನ ಮೂರ್ತಿ ನಿರ್ಮಿಸಲಾಗಿದೆ. ಗಣೇಶನ ಮೂರ್ತಿ ನಿರ್ಮಾಣಕ್ಕೆ ಮೈದಾ ಗಮ್ ಬಳಸಿದ್ದಾರೆ ಹಾಗೂ ಪರಿಸರಕ್ಕೆ ಹಾನಿ ಮಾಡುವ ಬಣ್ಣವನ್ನು ಇದಕ್ಕೆ ಬಳಕೆ ಮಾಡದೆ ಇರುವುದು ವಿಶೇಷವಾಗಿದೆ.
ಶಾಲೆಯ ನಿರ್ದೇಶಕ ಹೇಳಿದ್ದಿಷ್ಟು: ಈ ಬಗ್ಗೆ ಈಟಿವಿ ಭಾರತದೊಂದಿಗೆ ಶಾಲೆಯ ನಿರ್ದೇಶಕ ಡಾ. ಜಯಂತ್ ಅವರು ಮಾತನಾಡಿ, ಪ್ರಧಾನಿ ಮೋದಿಯವರು ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಿ ಎಂದು ಕರೆ ನೀಡಿದ್ದರು. ಯೂಟ್ಯೂಬ್ನಲ್ಲಿ ನೋಡಿ ಪರಿಸರ ಸ್ನೇಹಿ ಗಣಪತಿ ಮಾಡಿದ್ದೇವೆ. ಶಾಲೆಯಲ್ಲಿ ಏಳನೇ ವರ್ಷದ ಗಣೇಶೋತ್ಸವ ಆಚರಿಸಿದ್ದೇವೆ. 12 ಅಡಿಯ ಗಣೇಶನನ್ನು ಸಂಪೂರ್ಣವಾಗಿ ಪೇಪರ್ನಿಂದ ಶಾಲೆಯ ಮಕ್ಕಳು ಮಾಡಿದ್ದಾರೆ. ನಿರ್ಮಿಸಲು 10 ದಿನ ಹಿಡಿದಿದ್ದು, 40 ಕೆಜಿ ಪೇಪರ್ ಬಳಕೆ ಮಾಡಿ ಗಣೇಶನ ಮೂರ್ತಿ ನಿರ್ಮಿಸಲಾಗಿದೆ.ಮೈದಾ ಗಮ್ ಬಳಕೆ ಮಾಡಿದ್ದೇವೆ. ಇದರಲ್ಲಿ ಪರಿಸರಕ್ಕೆ ಹಾನಿ ಮಾಡುವ ಯಾವುದೇ ಬಣ್ಣವನ್ನು ಬಳಸಿಲ್ಲ. ಈ ಮೂರ್ತಿಯನ್ನು ನಾಲ್ಕು ಜನ ಶಾಲೆಯ ಮಕ್ಕಳು ಎತ್ತಿಕೊಂಡು ಹೋಗುವಷ್ಟು ಭಾರ ಇದೆ ಅಷ್ಟೆ. ಇದರಲ್ಲಿ ಹಾನಿಕಾರಕ ಕೆಮಿಕಲ್ಗಳನ್ನು ಬಳಕೆ ಮಾಡಿಲ್ಲ. ಎಲ್ಲ ಕಡೆಯೂ ಪರಿಸರ ಸ್ನೇಹಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ರೆ, ಪರಿಸರ ಹಾನಿಯನ್ನು ತಡೆಯಬಹುದಾಗಿದೆ ಎಂದಿದ್ದಾರೆ.
ಬೆಣ್ಣೆ ನಗರಿಯಲ್ಲಿ ಇಂದು ಗಣೇಶನ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಬಾರಿ ಪಿಒಪಿ ಗಣೇಶನ ಮೂರ್ತಿಗಳನ್ನು ಜಿಲ್ಲಾಡಳಿತ ಬ್ಯಾನ್ ಮಾಡಿದ್ದರಿಂದ ಈ ಬಾರಿ ನಗರದಾದ್ಯಂತ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದರ ನಡುವೆ ದಾವಣಗೆರೆ ನಗರದ ಸಿದ್ದಗಂಗಾ ಖಾಸಗಿ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ಸೇರಿ ಅನುಪಯುಕ್ತ ನ್ಯೂಸ್ ಪೇಪರ್ ಬಳಕೆ ಮಾಡಿ ಗಣೇಶನ ವಿಗ್ರಹವನ್ನು ನಿರ್ಮಾಣ ಮಾಡಿದ್ದಾರೆ. ವೀಕ್ಷಿಸಲು ಭಕ್ತರು ಆಗಮಿಸುತ್ತಿದ್ದಾರೆ.












