ಮುಂದಿನ ದಿನಗಳಲ್ಲಿ ಶ್ರೀಲಂಕಾಗೆ ಭಾರತದಿಂದ ಅಗತ್ಯ ನೆರವು ಮುಂದುವರಿಕೆ: ಸಚಿವ ಎಸ್. ಜೈಶಂಕರ್

ಕೊಲಂಬೊ (ಶ್ರೀಲಂಕಾ) : ತಮಿಳು ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರೀಲಂಕಾದಲ್ಲಿ ತಮಿಳು ಸಮುದಾಯದೊಂದಿಗೆ ಸಾಮರಸ್ಯ ಪ್ರಕ್ರಿಯೆ ನಡೆಯಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಭರವಸೆ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಭಾರತವು ಶ್ರೀಲಂಕಾಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುವುದನ್ನು ಮುಂದುವರಿಸುವುದಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಶ್ರೀಲಂಕಾ – ಭಾರತ ಸಂಸದೀಯ ಸ್ನೇಹ ಸಂಘದ ಭಾಗವಾಗಿರುವ ಸಂಸದರನ್ನು ಉದ್ದೇಶಿಸಿ ವಿಡಿಯೋ ಲಿಂಕ್ ಮೂಲಕ ಮಾತನಾಡಿದ ಎಸ್ ಜೈಶಂಕರ್, ಭಾರತ-ಶ್ರೀಲಂಕಾ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತವು ಎಲ್ಲ ರೀತಿಯಲ್ಲೂ ಕೆಲಸ ಮಾಡುತ್ತಿದೆ ಎಂದು ಒತ್ತಿ ಹೇಳಿದರು. “ಭಾರತವು ಶ್ರೀಲಂಕಾಕ್ಕೆ ಸಾಧ್ಯವಿರುವ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಾಗಿ ನೆರವು ನೀಡುವುದನ್ನು ಮುಂದುವರಿಸುತ್ತದೆ” ಎಂದು ಎಸ್ ಜೈಶಂಕರ್ ತಮ್ಮ ಭಾಷಣದಲ್ಲಿ ಹೇಳಿದರು.

ಶ್ರೀಲಂಕಾದ ಚೌಕಟ್ಟಿನೊಳಗೆ ತಮಿಳರ ಸಮಸ್ಯೆ ಪರಿಹಾರ- ಭಾರತದ ಬಯಕೆ: ಏಕೀಕೃತ ಮತ್ತು ಸಮೃದ್ಧ ಶ್ರೀಲಂಕಾದ ಚೌಕಟ್ಟಿನೊಳಗೆ ಸಮಾನತೆ, ನ್ಯಾಯ ಮತ್ತು ಸ್ವಾಭಿಮಾನಕ್ಕಾಗಿ ತಮಿಳು ಸಮುದಾಯದ ಬಯಕೆಗಳನ್ನು ಪರಿಹರಿಸುವ ಸಮನ್ವಯ ಪ್ರಕ್ರಿಯೆಯನ್ನು ಜೈಶಂಕರ್ ಬಯಸಿದ್ದಾರೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಭಾರತ-ಶ್ರೀಲಂಕಾ ಸಂಸದೀಯ ಸ್ನೇಹ ಸಂಘಟನೆಯ ಸದಸ್ಯರಿಗೆ ಇಎಎಂ ಮಾಹಿತಿ ನೀಡಿದೆ ಎಂದು ಕೊಲಂಬೊದಲ್ಲಿನ ಭಾರತೀಯ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.

ಕೊಲಂಬೊದಲ್ಲಿನ ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಮಾತನಾಡಿ, ಆಹಾರ ಭದ್ರತೆ, ಇಂಧನ ಭದ್ರತೆ, ಕರೆನ್ಸಿ ಬೆಂಬಲ ಮತ್ತು ದೀರ್ಘಕಾಲೀನ ಹೂಡಿಕೆ ಈ ನಾಲ್ಕು ಪ್ರಮುಖ ಕ್ಷೇತ್ರಗಳ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಲಂಕಾದ ಸಂಸದೀಯ ಸ್ಪೀಕರ್ ಮಹಿಂದಾ ಯಾಪಾ ಅಬೆವರ್ದನೆ, ಸಂಸದೀಯ ಸ್ನೇಹ ಸಂಘವನ್ನು ಬಳಸಿಕೊಂಡು ಕಾರ್ಯಗತಗೊಳಿಸಬಹುದಾದ ವಿನಿಮಯ ಕಾರ್ಯಕ್ರಮಗಳ ಮೂಲಕ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಹೇಳಿದರು.

ಶ್ರೀಲಂಕಾಗೆ ಭಾರತದಿಂದ ಕಳೆದ ವರ್ಷ 4 ಬಿಲಿಯನ್ ಡಾಲರ್ ನೆರವು: ಕಳೆದ ವರ್ಷ ಭಾರತವು ಶ್ರೀಲಂಕಾಕ್ಕೆ 4 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿತ್ತು. ಇದು ಅಗತ್ಯ ಸರಕುಗಳು ಮತ್ತು ಇಂಧನದ ರಫ್ತನ್ನು ಒಳಗೊಂಡಿದೆ. ವಿದೇಶಿ ವಿನಿಮಯದ ಕೊರತೆಯಿಂದ ಕಳೆದ ವರ್ಷ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ಇದೇ ಕಾರಣದಿಂದ ಶ್ರೀಲಂಕಾದ ಜನ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ವಿರುದ್ಧ ಬೀದಿಗಿಳಿದಿದ್ದರು. ಕೊನೆಗೆ ಗೋಟಬಯ ದೇಶದಿಂದ ಪಲಾಯನ ಮಾಡಿದ್ದರು. 2019 ರಲ್ಲಿ, ಆಗಿನ ಅಧ್ಯಕ್ಷ ಗೊಟಬಯ ರಾಜಪಕ್ಸೆ ತೆರಿಗೆ ಕಡಿತದ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಇದು ಶ್ರೀಲಂಕಾದ ಆರ್ಥಿಕತೆಗೆ ತೀವ್ರ ಹಾನಿ ಮಾಡಿತ್ತು.
ಜೈಶಂಕರ್ ತಮ್ಮ ಭಾಷಣದಲ್ಲಿ, ಭೌಗೋಳಿಕ ಸಾಮೀಪ್ಯ ಮತ್ತು ಉಭಯ ದೇಶಗಳ ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದ ಮೇಲೆ ಶ್ರೀಲಂಕಾದ ಅಭಿವೃದ್ಧಿ, ಸ್ಥಿರತೆ ಮತ್ತು ಸಮೃದ್ಧಿಗೆ ಭಾರತದ ಸಕಾರಾತ್ಮಕ ಕೊಡುಗೆಗಳ ಬಗ್ಗೆ ಮಾತನಾಡಿದರು. ಕಳೆದ ವರ್ಷ ಶ್ರೀಲಂಕಾ ಎದುರಿಸಿದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ತ್ವರಿತ ಮತ್ತು ಗಣನೀಯ ಸಹಾಯವನ್ನು ಅವರು ಎತ್ತಿ ತೋರಿಸಿದರು.