ಮೂಡಬಿದಿರೆ: ಜನರ ಸಮಸ್ಯೆಗೆ ಸ್ಪಂಧಿಸದ ಅಧಿಕಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ತರಾಟೆ

ಮೂಡಬಿದಿರೆ: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ ನೀಡದ ಮೂಡಬಿದಿರೆ ನಾಡಕಚೇರಿಯ ಅಧಿಕಾರಿಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ತರಾಟೆಗೆ ತೆಗೆದುಕೊಂಡಿದ್ದಾರೆ. 
ಸಾರ್ವಜನಿಕರ ಕುಂದು ಕೊರತೆ ನೀಗಿಸಲು ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಶಾಸಕರು ಏಕಾಏಕಿ ಮೂಡಾ ಕಚೇರಿಗೆ ತೆರಳಿದ್ದಾರೆ. 
ಈ ವೇಳೆ ಜನರು ಸರತಿ ಸಾಲಿನಲ್ಲಿ ನಿಂತದ್ದನ್ನು ಕಂಡ ಶಾಸಕರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತನ್ನ ರೌದ್ರಾವತಾರ ತೋರಿದ್ದಾರೆ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ. ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ ಅವರ ಸಮಸ್ಯೆ ಕೇಳುವವರಿಲ್ಲ. ಸವಲತ್ತುಗಳಿಗಾಗಿ ಅವರು ನಿಮ್ಮಲ್ಲಿ ಗೋಗರೆಯ ಬೇಕೇ? ಅಧಿಕಾರಿಗಳು ಯಾವಾಗಲೂ ಮೊಬೈಲ್‌ನಲ್ಲೇ ಬಾಕಿಯಾಗುತ್ತಿದ್ದಾರೆ. ಇನ್ನು ಮೇಲೆ ಕೆಲಸದ ವೇಳೆ ಯಾರಾದರೂ ಮೊಬೈಲ್ ಬಳಸುತ್ತಿರುವುದು ಕಂಡಲ್ಲಿ ಅವರನ್ನು ನೋಡಿಕೊಳ್ಳುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.