ಉಡುಪಿ: ಕಾಶೀಮಠ ಸಂಸ್ಥಾನ ವೆಲ್ಫೇರ್ ಫಂಡ್ (ರಿ)ವಿಟಿ ರೋಡ್ ಉಡುಪಿ, ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಜಿ.ಎಸ್.ಬಿ ಸಮಾಜದ 2021-22 ಸಾಲಿನ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರ ಗಳಲ್ಲಿ ಪಿ ಹೆಚ್ ಡಿ ಪದವಿ ಗಳಿಸಿದ ಒಟ್ಟು 86 ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ಸಮಾರಂಭ ಆದಿತ್ಯವಾರದಂದು ಟ್ರಸ್ಟ್ ಅಧ್ಯಕ್ಷರಾದ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು.
ಅರ್ಚಕ ವೃಂದದವರಿಂದ ದೇವತಾ ಪ್ರಾರ್ಥನೆ, ಶ್ರೀಪಾದರಿಗೆ ಪಾದ ಪೂಜೆ ನಡೆಸಿ ಫಲ ಪುಷ್ಪ ಅರ್ಪಿಸಲಾಯಿತು.
ಸ್ವಾಮೀಜಿಯವರು ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ, ವಿದ್ಯಾರ್ಥಿ ಜೀವನವು ಅಮೂಲ್ಯವಾಗಿದ್ದು ನಿತ್ಯ ಪರಿಶ್ರಮ ಹಾಗೂ ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿದಾಗ ವಿಶಿಷ್ಟ ಸಾಧನೆ ಮಾಡಲು ಸಾಧ್ಯ. ಹೆತ್ತವರು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುವಂತೆ ಅನುಗ್ರಹ ಸಂದೇಶ ನೀಡಿ ಶುಭಹಾರೈಸಿದರು. ಸಿಎ ಸುರೇಂದ್ರ ನಾಯಕ್ ಹಾಗೂ ಚೇಂಪಿ ಶ್ರೀಕಾಂತ್ ಭಟ್ ಪ್ರಸ್ತಾವಿಕವಾಗಿ ಮಾತನಾಡಿ, 64 ವರ್ಷಗಳ ಹಿಂದೆ ಜಿ ಎಸ್ ಬಿ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಕಾಶೀಮಠ ಹಿರಿಯ ಶ್ರೀಗಳಿಂದ ಕಾಶೀಮಠ ಸಂಸ್ಥಾನ ವೆಲ್ಫೇರ್ ಫಂಡ್ (ರಿ) ಉಡುಪಿಯಲ್ಲಿ ಸ್ಥಾಪನೆಗೊಂಡಿದ್ದು, ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ಮುಂತಾದೆಡೆ ಇದರ 27 ಶಾಖೆಗಳು ಕಾರ್ಯನಿರತವಾಗಿವೆ ಎಂದರು.
ವೇದಿಕೆಯಲ್ಲಿ ಸಮಿತಿಯ ಸದಸ್ಯರಾದ ಕೋಟೇಶ್ವರ ಶ್ರೀಧರ್ ಕಾಮತ್, ಪುಂಡಲೀಕ ಕಾಮತ್ , ರೋಹಿತಾಕ್ಷ ಪಡಿಯಾರ್, ಸಿಎ ಗುರುದಾಸ್ ಶೆಣೈ , ಪ್ರಭಾಕರ್ ಪೈ , ದೀಪಕ್ ಶೆಣೈ , ಮೋಹನದಾಸ್ ಕಾಮತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ದೇವಳದ ಆಡಳಿತ ಮೊಕ್ತೇಸರ ಪಿವಿ ಶೆಣೈ ಸ್ವಾಗತಿಸಿದರು, ಕಾರ್ಯದರ್ಶಿ ದಿನೇಶ್ ಶೆಣೈ ವರದಿ ವಾಚಿಸಿದರು, ಶ್ರೀನಿವಾಸ ಪ್ರಭು ವಂದಿಸಿ, ಶ್ರೀಧರ್ ಪೈ ನಿರೂಪಿಸಿದರು.












