ಮಂಗಳೂರು: 19-01-2021 ರಂದು ಸ್ನೇಹಾಲಯದ ಸಂಸ್ಥಾಪಕ ಬ್ರದರ್ ಜೋಸೆಫ್ ಕ್ರಾಸ್ತಾ ಅವರು ಉಪ್ಪಳ, ಕಾಸರಗೋಡು ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಕೆಂಚಣ್ಣ ಎಂಬ ವ್ಯಕ್ತಿಯನ್ನು ರಕ್ಷಿಸಿದ್ದರು. ಮಾನಸಿಕ ಅಸ್ವಸ್ಥತರಂತೆ ತೋರುತ್ತಿದ್ದ ಅವರು ಅತ್ಯಂತ ಹಿಂಸಾತ್ಮಕ ನಡವಳಿಕೆಯನ್ನು ಹೊಂದಿದ್ದರು. ಅನ್ನಾಹಾರವಿಲ್ಲದೆ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದ ಕೆಂಚಣ್ಣನನ್ನು ಮುಂದಿನ ಆರೈಕೆ ಹಾಗೂ ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು. ಮನೋವೈದ್ಯಕೀಯ ಸಲಹೆಗಾರರು ಮತ್ತು ವೈದ್ಯಕೀಯ ತಂಡವು ಅವರಿಗೆ ಸೂಕ್ತ ಆರೈಕೆ ಮತ್ತು ಬೆಂಬಲವನ್ನು ನೀಡುವಲ್ಲಿ ಯಶಸ್ವಿಯಾಯಿತು.
ಔಷಧಿಗಳ ಜೊತೆಗೆ, ವಿವಿಧ ಚಿಕಿತ್ಸಕ ಚಟುವಟಿಕೆಗಳು ಮತ್ತು ಸಮಾಲೋಚನೆ ಅವಧಿಗಳಲ್ಲಿ ಪಾಲ್ಗೊಳ್ಳುವಂತೆ ಅವರನ್ನು ಪ್ರೆರೇಪಿಸಲಾಯಿತು. ಅವರು ನೀಡಿದ ಮಾಹಿತಿಯ ಆಧಾರದ ಮೇಲೆ, ಸಾಮಾಜಿಕ ಕಾರ್ಯಕರ್ತರು ಅವರ ಕುಟುಂಬವನ್ನು ತಲುಪಲು ಸಾಧ್ಯವಾಯಿತು. ಫೋನ್ ಕಾಲ್ ಮೂಲಕ ಕೌಟುಂಬಿಕ ಸಮಾಲೋಚನೆಯಲ್ಲಿ ಕೆಂಚಣ್ಣ ಕೂಡ ಭಾಗವಹಿಸಿದರು. ತದನಂತರ ಮನೋವೈದ್ಯಕೀಯ ಸಮಾಜ ಸೇವಕರು ದಿನಾಂಕ 18-06-2023 ರಂದು ಸ್ನೇಹಾಲಯದಲ್ಲಿ ಕೌಟುಂಬಿಕ ಮಿಲನವನ್ನು ಆಯೋಜಿಸಿದರು. ಕೆಂಚಣ್ಣ ಅವರನ್ನು ಬರಮಾಡಿಕೊಳ್ಳಲು ಅವರ ಪತ್ನಿ ಹಾಗೂ ತಾಯಿ ಸ್ನೇಹಾಲಯಕ್ಕೆ ಆಗಮಿಸಿದರು. ಜೀವಂತವಿರುವ ಹಾಗೂ ಸುಸ್ಥಿತಿಯಲ್ಲಿರುವ ಆತನನ್ನು ಕಂಡು ಪತ್ನಿ ಹಾಗೂ ತಾಯಿ ಕಣ್ಣೀರಿಟ್ಟರು. ಕೆಂಚಣ್ಣ ಮತ್ತೆ ತನ್ನ ಕುಟುಂಬವನ್ನು ಹಾಗೂ ಮನೆಯನ್ನು ಸೇರುವುದು ನಿಜಕ್ಕೂ ಸ್ನೇಹಾಲಯ ಕುಟುಂಬಕ್ಕೆ ಸಂತೋಷ ಮತ್ತು ಆನಂದದಾಯಕವಾಗಿದೆ.
ಸ್ನೇಹಾಲಯವು ಈವರೆಗೆ ಸುಮಾರು 950 ಕ್ಕಿಂತಲೂ ಅಧಿಕ ಕುಟುಂಬಗಳ ಪುನರ್ ಮಿಲನಕ್ಕೆ ಸಾಕ್ಷಿಯಾಗಿದ್ದು, ಅನಾಥರಾಗಿ ರಸ್ತೆ ಬದಿಯಲ್ಲಿ ಶೋಚನೀಯಯ ಸ್ಥಿತಿಯಲ್ಲಿದ್ದವರು ಗುಣಮುಖರಾಗಿ ಮತ್ತೆ ತಮ್ಮ ಕುಟುಂಬವನ್ನು ಸೇರಿದಾಗ ಅದು ನಮಗೆ ನಿಜವಾದ ತೃಪ್ತಿ ಮತ್ತು ಸಂತೋಷವನ್ನು ನೀಡುತ್ತದೆ ಎಂದು ಸಂಸ್ಥೆ ತಿಳಿಸಿದೆ.












