ಮುಂಗಾಳು ಮಳೆ ವಿಳಂಬ; ಮೋಡ ಬಿತ್ತನೆಗೆ ಚಿಂತನೆ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

ಧಾರವಾಡ: ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬವಾಗುತ್ತಿದ್ದು, ಕಳೆದ ನಾಲ್ಕೈದು ದಿನಗಳ ಹಿಂದೆಯೇ ರಾಜ್ಯಕ್ಕೆ ಮುಂಗಾರು ಮಾರುತಗಳು ಆಗಮಿಸಿದ್ದರೂ ಮಳೆ ಸುರಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ತಲೆದೋರುತ್ತದೆ ಎನ್ನುವ ನಂಬಿಕೆ ಇದ್ದು, ಜನಸಾಮಾನ್ಯರು ಅದಾಗಲೇ ಈ ಬಗ್ಗೆ ಮಾತಾಡಿಕೊಳ್ಳುತ್ತಿದ್ದಾರೆ. ಮುಂಗಾರು ಮಳೆ ಬಂದು ಕೃಷಿ ಚಟುವಟಿಕೆಗಳು ಗರಿಗೆದರ ಬೇಕಾಗಿದ್ದ ಈ ಹೊತ್ತಿನಲ್ಲಿ ರಣಬಿಸಿಲು ಜನರನ್ನು ಹೈರಾಣಾಗಿಸಿದೆ. ಆಲ್ಲದೆ, ಮಳೆಯ ಆಗಮನದಲ್ಲಿರುವ ರೈತರು ಬಿತ್ತನೆ ಕಾರ್ಯಗಳನ್ನು ಮಾಡದೆ ಮಳೆಗಾಗಿ ಎದುರು ನೋಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮೋಡ ಬಿತ್ತನೆಗೆ ಚಿಂತನೆ ಮಾಡುತ್ತಿದೆ ಎನ್ನಲಾಗಿದ್ದು, ಈ ಬಗ್ಗೆ ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷಿ ಸಚಿವ, ಮುಂಗಾರು ಮಳೆ ತಡವಾಗಿದೆ. ಕಳೆದ ಸಲಕ್ಕಿಂತ ಈ ಬಾರಿ ಶೇ. 30ರಷ್ಟು ಮಳೆ ಕಡಿಮೆಯಾಗಿದೆ. ಮಳೆಯ ನಿರೀಕ್ಷೆ ಮಾಡುತ್ತಿದ್ದೇವೆ. ಒಂದು ವಾರದಿಂದ ತಡವಾಗುತ್ತಲೇ ಇದೆ. ಮುಂದಿನ ಎರಡು ದಿನ ಕಾದು ನೋಡುತ್ತೇವೆ. ಬೀಜ ರಸಗೊಬ್ಬರ ಎಲ್ಲ ಸಂಗ್ರಹ ಮಾಡಿಟ್ಟುಕೊಂಡಿದ್ದೇವೆ. ಆದರೆ ಮುಂಗಾರು ವಿಳಂಬದಿಂದ ಬೇರೆ ಏನೂ ಮಾಡಲು ಆಗುತ್ತಿಲ್ಲ. ಮೂರು ದಿನದಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆಗೆ ಚಿಂತನೆ ಮಾಡಲಾಗಿದೆ. ಗುರುವಾರ ಸಂಪುಟ ಸಭೆ ನಡೆಯಲಿದ್ದು ಅಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.