ಹೊಸದಾಗಿ 50 ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲು ಮುಂದಾದ ಬಿಬಿಎಂಪಿ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೆ ಹೊಸದಾಗಿ ಸುಮಾರು 50 ಇಂದಿರಾ ಕ್ಯಾಂಟೀನ್​ಗಳು ತಲೆ ಎತ್ತಲಿವೆ. ಬೆಂಗಳೂರಿನಲ್ಲಿ ಸುಮಾರು 175 ಇಂದಿರಾ ಕ್ಯಾಂಟೀನ್​ಗಳಿದ್ದು, 163 ಕ್ಯಾಂಟೀನ್​​ಗಳು ಸದ್ಯ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ಇನ್ನೂ ಸುಮಾರು 50 ಹೊಸ ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲು ಬಿಬಿಎಂಪಿ ಮುಂದಾಗಿದೆ.
ವಾರ್ಡ್‌ಗೊಂದರಂತೆ ಇಂದಿರಾ ಕ್ಯಾಂಟೀನ್​ಗಳು ಬಡವರ ಹೊಟ್ಟೆಯನ್ನು ತುಂಬಿಸುತ್ತಿವೆ. ಕ್ಯಾಂಟೀನ್‌ ಕಟ್ಟಡ ಇಲ್ಲದ ವಾರ್ಡ್‌ಗಳಲ್ಲಿ ಮೊಬೈಲ್‌ ಕ್ಯಾಂಟೀನ್‌ಗಳು ಸೇವೆ ನೀಡುತ್ತಿವೆ. ಇದರ ಜೊತೆಗೆ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಹೊಸದಾಗಿ 50 ಇಂದಿರಾ ಕ್ಯಾಂಟಿನ್​ಗಳು ತಲೆ ಎತ್ತಲಿವೆ.
ಆರ್ಥಿಕ ಸಂಕಷ್ಟದ ನಡುವೆಯೂ ಇಂದಿರಾ ಕ್ಯಾಂಟೀನ್​ನ ಪುನಶ್ಚೇತನಕ್ಕೆ ಪಾಲಿಕೆ ಮುಂದಾಗಿದೆ. ಕೆಲ ದಿನಗಳ ಹಿಂದೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೊಸದಾಗಿ ಆಹಾರದ ಮೆನು ಸಿದ್ಧಪಡಿಸಿ, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಿ ಎಂದು ಅಧಿಕಾರಿಗಳಿಗೆ ಪಾಲಿಕೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದರು.

ಈ ಸಂಬಂಧ ಬೆಂಗಳೂರಿನಲ್ಲಿ ಮತ್ತೆ ಹೊಸದಾಗಿ ಸುಮಾರು 50 ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಇದೇ ವರ್ಷ 50ಕ್ಕೂ ಹೆಚ್ಚು ಹೊಸ ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಸೂಚನೆಯಂತೆ ಇಂದಿರಾ ಕ್ಯಾಂಟೀನ್ ಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿದ್ದೇವೆ. ಹೀಗಾಗಿ ಹೆಚ್ಚುವರಿ ಅನುದಾನಕ್ಕೆ ಪಾಲಿಕೆ, ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್​ಗಳಿಗೆ ಮರು ಜೀವ ಬಂದಿದೆ. ಈ ಹಿನ್ನಲೆ ಇಂದಿರಾ ಕ್ಯಾಂಟೀನ್​ನಲ್ಲಿ ದಿನಕ್ಕೊಂದು ರುಚಿಕರ ಆಹಾರವನ್ನು ಜನರಿಗೆ ಒದಗಿಸಲು ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಇಂದಿರಾ ಕ್ಯಾಂಟೀನ್ ಗುಣಮಟ್ಟ ಹಾಗೂ ಆಹಾರ ಬಗೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ಬಿಬಿಎಂಪಿ ನಿರ್ಧರಿಸಿದೆ. ಇದರಲ್ಲಿ ಹತ್ತಕ್ಕೂ ಹೆಚ್ಚು ರುಚಿಕರ ಆಹಾರಗಳನ್ನು ಪಟ್ಟಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 175 ಇಂದಿರಾ ಕ್ಯಾಂಟೀನ್​​ಗಳಿದ್ದು ಇವುಗಳ ಪೈಕಿ 163 ಇಂದಿರಾ ಕ್ಯಾಂಟೀನ್ ಸದ್ಯ ಚಾಲ್ತಿಯಲ್ಲಿವೆ. ಇನ್ನು ಉಳಿದ ಕ್ಯಾಂಟೀನ್​ಗಳಿಗೆ ಮರುಜೀವ ನೀಡುವ ಯೋಜನೆಯ ಹಿನ್ನೆಲೆ ನಗರದ ಬಹುತೇಕ ಕಡೆಗಳಲ್ಲಿ ಕ್ಯಾಂಟೀನ್ ಆವರಣಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ.
ಪಂಚ ಗ್ಯಾರಂಟಿಗಳ ನಡುವೆಯೂ ಸಿಎಂ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಗೆ ಮತ್ತಷ್ಟು ಅನುದಾನ ನೀಡಲು ಮುಂದಾಗಿದ್ದಾರೆ. ಈಗಾಗಲೇ ಇಂದಿರಾ ಕ್ಯಾಂಟೀನ್ ದುರಸ್ಥಿಗೆ ಪ್ರತಿ ಇಂದಿರಾ ಕ್ಯಾಂಟೀನ್​ಗೂ ಒಂದು ಲಕ್ಷ ತುರ್ತು ಅನುದಾನ ಬಿಡುಗಡೆ ಮಾಡಿದ್ದಾರೆ. ಜೊತೆಗೆ ವಿಧಾನಸೌಧ, ವಿಕಾಸಸೌಧ, ಶಾಸಕರ ಭವನಕ್ಕೆ ಬರುವವರು, ಅಲ್ಲಿ ಕಾರ್ಯನಿರ್ವಹಿಸುವವರಿಗಾಗಿ ಹೊಸದಾಗಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.