ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ವಿರಾಟಪರ್ವಪ್ರವಚನಮಂಗಲ ಮತ್ತು ಷಷ್ಠಿಪೂರ್ತಿ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ “ವಿಶ್ವಾರ್ಪಣಂ” ಅನ್ನು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಯೋಜಿಸಿದ್ದು, ಇದರ ಅಂಗವಾಗಿ ಒಂದು ಕೋಟಿಸಂಖ್ಯೆಯಲ್ಲಿ ಧನ್ವಂತರಿ ಜಪ ಹಾಗೂ ಒಂದು ಲಕ್ಷವರ್ತಿಯಲ್ಲಿ ಮತ್ಸ್ಯಾದಿ ದಶ ಕುಂಡಗಳಲ್ಲಿ 108 ಋತ್ವಿಜರಿಂದ ಧನ್ವಂತರಿ ಯಾಗವು ನಡೆಯಿತು.
ನಂತರ 42 ಪುಣ್ಯ ಕ್ಷೇತ್ರ ಹಾಗೂ ಪುಣ್ಯ ನದಿಗಳ ಜಲವನ್ನು ಹೋಮದ ಕಲಶಗಳಿಗೆ ಅಭಿಮಂತ್ರಣೆ ಮಾಡಿ, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಗೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಕಲಶಾಭಿಷೇಕ ಮಾಡಿದರು.












