ಮಂಗಳಮುಖಿಯರಿಂದ ಅನೈತಿಕ ಕಾರ್ಯ ದೂರು ಹಿನ್ನೆಲೆ: ಖುದ್ದು ಕಾರ್ಯಾಚರಣೆ ನಡೆಸಿದ ಎಸ್ಪಿ ಅಕ್ಷಯ್ ಹಾಕೆ

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದ ಸಮೀಪ ಮಂಗಳಮುಖಿಯರನ್ನು ಅನೈತಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ದೂರಿನ ಹಿನ್ನೆಲೆಯಲ್ಲಿ ಡಿ. 16 ರಂದು ತಡ ರಾತ್ರಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚೀಂದ್ರ ಖುದ್ದು ಕಾರ್ಯಾಚರಣೆ ನಡೆಸಿದ್ದಾರೆ.

ಕಾರ್ಯಾಚರಣೇಯ ಸಂದರ್ಭ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ನಗರದ ಬಸ್ ನಿಲ್ದಾಣಗಳಲ್ಲಿ ರಾತ್ರಿ ಹೊತ್ತಿನಲ್ಲಿ ಕೆಲವು ಮಂಗಳಮುಖಿಯರು ಸಾರ್ವಜನಿಕರ ವಾಹನಗಳನ್ನು ಅಡ್ಡಹಾಕಿ ತೊಂದರೆ ಕೊಡುವ ಬಗ್ಗೆ ವರದಿಯಾಗಿತ್ತು. ಇದಲ್ಲದೆ ದಾರಿದೀಪಗಳನ್ನು ಒಡೆದು ಹಾಕಿ ಜನರಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆಯೂ ದೂರುಗಳು ಕೇಳಿಬಂದಿದ್ದವು.

ದೂರುಗಳ ಹಿನ್ನೆಲೆಯಲ್ಲಿ ಉಡುಪಿ ಎಸ್ಪಿ ಅಕ್ಷಯ್ ಮಚ್ಚೀಂದ್ರ ಖುದ್ದು ಕಾರ್ಯಾಚರಣೆಗೆ ಇಳಿದಿದ್ದು, ಮಂಗಳಮುಖಿಯರನ್ನು ತೆರವುಗೊಳಿಸಲು ಪ್ರಯತ್ನಿಸಿದಾಗ, ಮಫ್ತಿಯಲ್ಲಿದ್ದವರು ಎಸ್ಪಿ ಎಂದು ಅರಿಯದೆ ಮಂಗಳಮುಖಿಯರು ವಾಗ್ವಾದಕ್ಕೆ ಇಳಿದಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕಾಗಮಿಸಿ ಎಲ್ಲರನ್ನು ಚದುರಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಹಕರನ್ನು ರಿಕ್ಷಾದಲ್ಲಿ ಕರೆತಂದು ಮಂಗಳಮುಖಿಯರ ಕೈಯಲ್ಲಿ ಅನೈತಿಕ ಕಾರ್ಯ ಮಾಡಿಸುತ್ತಿದ್ದ ಇಬ್ಬರು ಪಿಂಪ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.