ಸಂಚಲನ-ಉನ್ನತಿ ಕೆರಿಯರ್ ಅಕಾಡೆಮಿ-ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಲಿ: ಬಿಎಫ್ಎಸ್ಐ ಕ್ಷೇತ್ರದಲ್ಲಿ ಉಚಿತ ತರಬೇತಿ ಹಾಗೂ ಉದ್ಯೋಗಾವಕಾಶ

ಉಡುಪಿ: ಕಳೆದ 7 ವರ್ಷಗಳಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಹಾಗೂ ಪ್ರಕಲ್ಪಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಘಟನೆ ಸಂಚಲನ ಸಂಸ್ಥೆಯು ಇದೀಗ ದೇಶದ ಅಗ್ರಮಾನ್ಯ ಲಾಜಿಸ್ಟಿಕ್ಸ್ ಸಂಸ್ಥೆಯಾದ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಪ್ರೈ ಲಿ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಉಡುಪಿ ಜಿಲ್ಲೆಯ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ ಸಂಚಲನ ಸಂಸ್ಥೆಯು ತನ್ನ ತರಬೇತು ಪಾಲುದಾರ ಸಂಸ್ಥೆ ಹಾಗೂ ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿ ಮೂಲಕ ಜಿಲ್ಲೆಯ 60 ಯುವಕ-ಯುವತಿಯರನ್ನು ಸಂದರ್ಶನದ ಮೂಲಕ ಆಯ್ಕೆಗೊಳಿಸಿ ಮುಂದಿನ 2 ತಿಂಗಳು ಬಿ ಎಫ್ ಎಸ್ ಐ ಕ್ಷೇತ್ರದ ಪರಿಣಿತರಿಂದ 3 ಸ್ಪೆಷಲೈಸೆಷನ್ ಗಳಲ್ಲಿ ಸಂಪೂರ್ಣ ಉಚಿತ ತರಬೇತಿ ನೀಡಿ ನಂತರ ಉದ್ಯೋಗಾವಕಾಶವನ್ನು ಒದಗಿಸಲಿದೆ.

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ನೋಂದಾಯಿಸಿಕೊಂಡಿದ್ದ ವಿವಿಧ ಕಾಲೇಜುಗಳ ನೂರಾರು ಅಭ್ಯರ್ಥಿಗಳ ಸಂದರ್ಶನವನ್ನು ನಡೆಸಿ ಅಂತಿಮವಾಗಿ ಜಿಲ್ಲೆಯ 60 ಅಭ್ಯರ್ಥಿಗಳನ್ನು ಆಯ್ಕೆಗೊಳಿಸಲಾಗಿದೆ.

ಈ ಅಭ್ಯರ್ಥಿಗಳಿಗೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬಹುಬೇಡಿಕೆಯ ಕೆವೈಸಿ-ಎಎಂಎಲ್, ಕಸ್ಟಮರ್ ಸರ್ವಿಸ್ ಆಂಡ್ ಬ್ಯಾಂಕಿಂಗ್ ಸ್ಟಾಂಡರ್ಡ್ ಕೋಡ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ವಿಷಯಗಳಲ್ಲಿ ಪರಿಣಿತರಿಂದ ಉಚಿತ ತರಬೇತಿ ನೀಡಿ ನಂತರ ಉದ್ಯೋಗ ಮೇಳದ ಮೂಲಕ ಉತ್ತಮ ಉದ್ಯೋಗಾವಕಾಶ ಒದಗಿಸಲಾಗುವುದು. ಈ ಯೋಜನೆಯ ಸದುಪಯೋಗವನ್ನು ಜಿಲ್ಲೆಯ ಅಭ್ಯರ್ಥಿಗಳು ಪಡೆದುಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದು ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ, ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.