ಉಡುಪಿ: ಕನ್ನಡ ಶಾಲೆಯ ಕುರಿತು ಕೀಳರಿಮೆ ಬೇಡ. ನಾನು ಸ್ವತಃ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದು ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಯಿತು. ಶಿಕ್ಷಣದಲ್ಲಿ ಮಾಧ್ಯಮ ಮುಖ್ಯವಲ್ಲ, ಜೀವನದಲ್ಲಿ ಗುರಿ ಹಾಗೂ ಅದಕ್ಕೆ ಪೂರಕವಾದ ಪರಿಶ್ರಮವಿದ್ದರೆ ಯಾವುದೂ ಅಸಾಧ್ಯವಲ್ಲ. ಹೆಣ್ಣು ಮಕ್ಕಳು ವೈಯಕ್ತಿಕ ನೈರ್ಮಲ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಈ ಶೌಚಾಲಯವನ್ನು ಹಲವಾರು ಹೆಣ್ಣು ಮಕ್ಕಳಿಗೆ ಅನುಕೂಲವಾಗಲೆಂದು ನಮ್ಮ ಫೌಂಡೇಶನ್ ಮೂಲಕ ನಿರ್ಮಿಸಲಾಗಿದೆ. ಇದರ ಮುಂದಿನ ನಿರ್ವಹಣೆ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಉಡುಪಿ ವೆಂಟನ ಫೌಂಡೇಶನ್ ಸದಸ್ಯೆ ಹಾಗೂ ಉಡುಪಿಯ 99ಗೇಮ್ಸ್ ಆನ್ ಲೈನ್ ಪ್ರೈವೇಟ್ ಲಿಮಿಟೆಡ್ ನ ಉಪಾಧ್ಯಕ್ಷೆ ಶಿಲ್ಪಾ ಭಟ್ ಹೇಳಿದರು.
ಅವರು ಕುಂಭಾಶಿ ಕೊರವಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೆಂಟನ ಫೌಂಡೇಶನ್ ವತಿಯಿಂದ ಸುಮಾರು 5.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೆಣ್ಣು ಮಕ್ಕಳ ಶೌಚಾಲಯವನ್ನು ಹಸ್ತಾಂತರ ನಡೆಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್ ಆರ್ ವಹಿಸಿದ್ದರು.
ರಾಜೇಶ್ ಬಂಗೇರ, ಮ್ಯಾನೆಜಿಂಗ್ ಟ್ರಸ್ಟಿ, ಕೊರವಡಿ ಎಜುಕೇಶನಲ್, ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್, ಜಯರಾಮ ಶೆಟ್ಟಿ ಪಂಚಾಯತ್ ಅಭಿವೃದ್ದಿ ಅಧಿಕಾರಿ, ವಾಸುದೇವ ಹತ್ವಾರ್ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ, ಸಂತೋಷ್ ಶಿಕ್ಷಣ ಸಂಯೋಜಕ ಕುಂದಾಪುರ ವಲಯ, ಮತ್ತಿತರರು ಉಪಸ್ಥಿತರಿದ್ದರು.
ಕಟ್ಟಡ ನಿರ್ಮಾಣದ ಜವಾಬ್ಧಾರಿ ವಹಿಸಿ ಶೀಘ್ರವಾಗಿ ನಿರ್ಮಿಸಿ ಕೊಟ್ಟ ಎಂಜಿನಿಯರ್ ಶ್ರೀನಿಧಿ ಉಪಾಧ್ಯ ಹಾಗೂ ರೋಟರಿ ಸಮುದಾಯ ದಳದ ಅಧ್ಯಕ್ಷ ಶ್ರೀಧರ ಪುರಾಣಿಕ್ ಅವರನ್ನು ಗೌರವಿಸಲಾಯಿತು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ರಾಮಚಂದ್ರ ಉಪಾಧ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿದರು. ಶಿಕ್ಷಕಿ
ಮಾಲತಿ ಶೆಟ್ಟಿ ವಂದನಾರ್ಪಣೆಗೈದರು. ಸುಪ್ರೀತಾ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಶಿಕ್ಷಕ ವೃಂದದವರು, ಶಾಲಾಭಿವೃದ್ಧಿ ಸದಸ್ಯರು, ರೋಟರಿ ಸಮುದಾಯ ದಳದ ಸದಸ್ಯರು, ಶಾಲಾ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.












