ಉಡುಪಿ: ‘ಭೂ ಸುಧಾರಣಾ ಕಾಯ್ದೆಯ’ ಸುವರ್ಣ ಮಾಹೋತ್ಸವ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ‘ಭೂ ಸುಧಾರಣಾ ಕಾಯ್ದೆಯ’ ಸುವರ್ಣ ಮಾಹೋತ್ಸವ ಹಿರಿಯಡಕ ಗಾಂಧಿ ಮೈದಾನದಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಭಾರತದಲ್ಲಿ ಸಂವಿಧಾನ ಜಾರಿಯಾಗಿ 72 ವರ್ಷ ಕಳೆದರೂ, ಆರ್ಥಿಕ, ಸಾಮಾಜಿಕ ಸಮಾನತೆ ಸಾಧಿಸಲು ಆಗಿಲ್ಲ. ಸಮಸಮಾಜ ನಿರ್ಮಾಣ ಇನ್ನೂ ಆಗಿಲ್ಲ. ಅವಕಾಶಗಳಿಂದ ವಂಚಿತರಾದ ಜನರಿಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದರು.

ಅಂದಿನ ಇಂದಿರಾ ಗಾಂಧಿ ಸರ್ಕಾರವು ಜಾರಿಗೊಳಿಸಿದ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನಿನಿಂದ ಗೇಣಿದಾರರಾಗಿದ್ದ ದಲಿತರು, ಬಡವರು, ಹಿಂದುಳಿದ ವರ್ಗದವರು ಭೂಮಿಯ ಒಡೆಯರಾದರು. ಕರಾವಳಿ ಭಾಗದಲ್ಲೂ ಮೂರ್ತೆದಾರರು, ಮೊಗವೀರರು ಹಾಗೂ ಇತರೆ ವರ್ಗದವರು ಭೂಮಿಯ ಒಡೆಯರಾದರು. ಆದರೆ ಈಗಿನ ಬಿಜೆಪಿ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತಂದು, ಉಳ್ಳವನೇ ಭೂಮಿಯ ಒಡೆಯಯನ್ನಾಗಿ ಮಾಡಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು ಅವರು ಸಿದ್ದರಾಮಯ್ಯನವರಿಗೆ ಶಾಲು, ಪೇಟ ತೊಡಿಸಿ ಸನ್ಮಾನಿಸಿದರು.

ಸಮಾವೇಶದಲ್ಲಿ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲು, ಬ್ಲಾಕ್ ಅಧ್ಯಕ್ಷರಾದ ರಮೇಶ್ ಕಾಂಚನ್, ಹರೀಶ್ ಕರ್ಮಾಕ್ಕಿ, ದಿನಕರ ಹೇರೂರು, ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಶಿವಾಜಿ ಸುವರ್ಣ ರಾಜು ಪೂಜಾರಿ, ಅಮೃತ್ ಶೆಣೈ, ಹರೀಶ್ ಕಿಣಿ, ವೆರೊನಿಕಾ ಕರ್ನೇಲಿಯೊ, ಶ್ಯಾಮಲ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.