ಹೆಮ್ಮಾಡಿ ಬಳಿ ಟಿಪ್ಪರ್ – ದ್ವಿಚಕ್ರ ವಾಹನ ಡಿಕ್ಕಿ; ಮಹಿಳೆ ಮೃತ್ಯು, ಪತಿ ಮಗುವಿಗೆ ಗಾಯ

ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹೆಮ್ಮಾಡಿಯಲ್ಲಿ ಭಾನುವಾರ ನಡೆದಿದೆ.

ಮೃತರನ್ನು ಅರೆಹೊಳೆ ಎರುಕೋಣೆ ಸಮೀಪದ ರಾಗಿಹಕ್ಲು ನಿವಾಸಿ ಜ್ಯೋತಿ ಎಂದು ಗುರುತಿಸಲಾಗಿದೆ. ಇವರ ಪತಿ ಶರತ್ ಹಾಗೂ ಮಗು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಅತಿವೇಗದಿಂದ ಬಂದಿದ್ದು, ಅದೇ ದಾರಿಯಲ್ಲಿ ತೆರಳುತ್ತಿದ್ದ ಸ್ಕೂಟಿಗೆ ಡಿಕ್ಕಿಯಾಗಿದೆ. ತನ್ನ ಜೊತೆಗೆ ಬೀಳುತ್ತಿದ್ದ ಮಗುವನ್ನು ಇನ್ನೊಂದು ಮಗ್ಗುಲಿಗೆ ಹಾಕಿ ಮಹಿಳೆ ಬೊಬ್ಬೆ ಹೊಡೆದರೂ ಕೇಳಿಸದೆ ಆಕೆಯ ಮೇಲೆ ಟಿಪ್ಪರ್ ಹರಿದಿದೆ. ಮಗು ಹಾಗೂ ಆಕೆಯ ಪತಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ದಂಪತಿ ಕುಂದಾಪುರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.