ಕುಂದಾಪುರ: ಒಣಹುಲ್ಲು ಸಾಗಿಸುತ್ತಿದ್ದ ವಾಹನಕ್ಕೆ ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಕುಂದಾಪುರ: ಒಣಹುಲ್ಲು ಸಾಗಿಸುತ್ತಿದ್ದ ವಾಹನಕ್ಕೆ ವಿದ್ಯುತ್‌ ತಂತಿ ತಗುಲಿ ಅಗ್ನಿ ಅವಘಡ ಉಂಟಾದ ಘಟನೆ ಕುಂದಾಪುರ ತಾಲೂಕಿನ ಕೊರ್ಗಿ ಗಿರಿಜಾ ಚಂದ್ರಶೇಖರ್‌ ಹೆಗ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಶಿಕಾರಿಪುರದಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರ ನಿವಾಸಕ್ಕೆ ಜಾನುವಾರುಗಳ ಮೇವಿಗಾಗಿ ಬೈಹುಲ್ಲು ಸಾಗಿಸುತ್ತಿತ್ತು. ಶಾಲಾ ಸಮೀಪದಲ್ಲಿ ಬರುತ್ತಿದ್ದಂತೆ ವಿದ್ಯುತ್‌ ಸಂಪರ್ಕ ತಂತಿ ತಗುಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿದಿದೆ.

ಬೆಂಕಿ ತಗುಲಿದ ಪರಿಣಾಮ ವಾಹನದಲ್ಲಿದ್ದ ಸುಮಾರು 30 ಸಾವಿರಕ್ಕೂ ಅಧಿಕ ಮೊತ್ತದ ಬೈಹುಲ್ಲು ಬೆಂಕಿಗೆ ಆಹುತಿಯಾಗಿದೆ.

ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭವನೀಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಅದೃಷ್ಟಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.